ಭವಿಷ್ಯತ್ತಿನ ಉನ್ನತಿ ವರ್ತಮಾನದಲ್ಲಿ ಅಡಗಿದೆ.ಭೂತಕಾಲದಲ್ಲಿ ನಡೆದದ್ದು ವರ್ತಮಾನದಲ್ಲಿ ಅನುಭವಿಸಬಹುದು. ಕರಾವಳಿಯ ಜನರು ನಂಬಿಕೆ, ಆತ್ಮವಿಶ್ವಾಸದ ಜನತೆ. ಆದುದರಿಂದ ಭಗವಂತನ ಅನುಗ್ರಹ ಸದಾ ಇವರ ಮೇಲಿದೆ. ಆದುದರಿಂದ ಯಾವುದೇ ಪ್ರಕೃತಿ ವಿಕೋಪಗಳಿಗೆ ಭಯಭೀತರಾಗುವ ಅವಶ್ಯಕತೆಯಿಲ್ಲ. ಅವಧೂತ ಗೀತೆ ಎಂಬುದು ಶ್ರೇಷ್ಠವಾದದ್ದು. ಅಂತರಂಗಕ್ಕೆ ತುಂಬಾ ಪ್ರಭಾವ ಬೀರುವ ಒಳ್ಳೆಯ ತತ್ತ್ವಗಳು ಅದರೊಳಗಿದೆ. ಪಾರಮಾರ್ಥಿಕತೆಯ ಕಡೆಗೆ ಸಾಗುವುದಕ್ಕೆ ಗುರುವಿನ ಮಾರ್ಗದರ್ಶನ ಅಗತ್ಯವಿದೆ. ಗುರುತತ್ತ್ವದ ಮಹಿಮೆ ಗುರುಚರಿತ್ರೆಯಲ್ಲಿ ಅಡಗಿದೆ. ಗುರುತತ್ತ್ವವನ್ನು ನಾವೂ ಸಹ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನ ಪಾವನವನ್ನಾಗಿಸೋಣ ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಶ್ರೀ ದತ್ತ ಜಯಂತಿ ಮಹೋತ್ಸವದ ಸುಸಂದರ್ಭ ಆಯೋಜಿಸಿದ್ದ ಶ್ರೀ ಗುರುಚರಿತ್ರೆ ಪ್ರವಚನ ಸಪ್ತಾಹಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಅಪರಾಹ್ಣ ಶ್ರೀಮದ್ಭಾಗವತ ಕಥಾಮೃತದ ಆಯ್ದ ಕಥೆಗಳ ಯಕ್ಷಗಾನ ತಾಳಮದ್ದಳೆ ಸಪ್ತಾಹಕ್ಕೆ ಪೂಜ್ಯ ಶ್ರೀಗಳವರು ಚೆಂಡೆ ವಾದಿಸುವ ಮೂಲಕ ಚಾಲನೆ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದು, ಶ್ರೀ ಮಲಾರು ಜಯರಾಮ ರೈ ಶ್ರೀ ಗುರುಚರಿತ್ರೆ ಪ್ರವಚನ ಆರಂಭಿಸಿದರು. ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಚಂದ್ರಪ್ರಭಾ ಹೆಗ್ಡೆ, ಶ್ರೀ ರಮಾನಂದ ಹೆಗ್ಡೆ, ಮುಂಬೈ ಉದ್ಯಮಿ ಶ್ರೀ ವಾಮಯ್ಯ ಬಿ. ಶೆಟ್ಟಿ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಶ್ರೀ ಟಿ. ತಾರಾನಾಥ ಕೊಟ್ಟಾರಿ, ಒಡಿಯೂರ್ದ ತುಳುಕೂಟದ ಅಧ್ಯಕ್ಷ ಶ್ರೀ ಎಚ್.ಕೆ. ಪುರುಷೋತ್ತಮ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಂಗಳೂರು ವಲಯದ ಅಧ್ಯಕ್ಷ ಶ್ರೀ ಜಯಂತ್ ಜೆ. ಕೋಟ್ಯಾನ್, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಒಡಿಯೂರು ಘಟಕದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಮುಂಬೈ ಘಟಕದ ಅಧ್ಯಕ್ಷೆ ಶ್ರೀ ರೇವತಿ ವಿ. ಶೆಟ್ಟಿ, ಶ್ರೀಮತಿ ಕೃಷ್ಣವೇಣಿ ಜೆ. ಶೆಟ್ಟಿ, ಶ್ರೀಮತಿ ಗೀತಾ ಜಯರಾಮ ರೈ ಉಪಸ್ಥಿತರಿದ್ದರು.