“ಹಬ್ಬಗಳಲ್ಲಿ ಸನಾತನ ಹಿಂದೂ ಧರ್ಮದ ಬೇರುಗಳು ಅಡಗಿವೆ. ಶ್ರಾವಣ ಮಾಸದಲ್ಲಿ ಬರುವ ನಾಗರ ಪಂಚಮಿ ಮಹೋತ್ಸವ ನಾಡಿನ ಜನರು ವಿಶೇಷವಾಗಿ ಆಚರಿಸುವ ಸಂವತ್ಸರದ ಪ್ರಥಮ ಹಬ್ಬವಾಗಿದೆ. ಬದುಕು ಹಬ್ಬವಾಗಲು ಇಂತಹ ಧಾರ್ಮಿಕ ಆಚರಣೆಗಳಲ್ಲಿ ಭಾಗಿಗಳಾಗಬೇಕು. ಸಾಮೂಹಿಕವಾಗಿ ಸಲ್ಲಿಸಿದ ಪೂಜೆ, ಪ್ರಾರ್ಥನೆಗಳಿಗೆ ವಿಶೇಷವಾದ ಶಕ್ತಿಯಿದೆ. ಧಾರ್ಮಿಕ ಹಬ್ಬಗಳು ಸರ್ವರ ಆತ್ಮತೃಪ್ತಿಗೆ ಪೂರಕವಾಗಿ ಆಚರಣೆಯಾಗಲಿ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ನಾಗರ ಪಂಚಮಿ ಮಹೋತ್ಸವ-ಸಾರ್ವಜನಿಕ ಆಶ್ಲೇಷ ಬಲಿಪೂಜೆಯ ಸಂದರ್ಭ ಸಂದೇಶ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಸಾನ್ನಿಧ್ಯ ವಹಿಸಿದ್ದರು. ವೇ|ಮೂ| ಚಂದ್ರಶೇಖರ ಉಪಾಧ್ಯಾಯಯರ ವೈದಿಕತ್ವದಲ್ಲಿ ಸ್ವಯಂಭೂ ನಾಗದೇವರಿಗೆ ತನು ತಂಬಿಲ, ಕ್ಷೀರಾಭಿಷೇಕ, ಕಲ್ಪೋಕ್ತ ಪೂಜೆ ಹಾಗೂ ಆಶ್ಲೇಷ ಬಲಿಪೂಜೆ ನಡೆಯಿತು. ರಾತ್ರಿ ರಂಗಪೂಜೆ, ಮಹಾಪೂಜೆ ಸಂಪನ್ನಗೊಂಡಿತು.