ಮೂಲನಂಬಿಕೆ ಎಂದರೆ ಪ್ರಕೃತಿಯಷ್ಟೇ ಸತ್ಯ. ಪ್ರಕೃತಿಯಲ್ಲಿ ಸಹಜವಾಗಿ ಮತ್ತು ನಿರಂತರ ಪರಿವರ್ತನೆಯನ್ನು ಕಾಣಬಹುದು. ಪ್ರಕೃತಿಯನ್ನು ಮರೆತರೆ ಬದುಕಿಲ್ಲ. ಅದನ್ನು ಮೂಢನಂಬಿಕೆ ಎಂದು ಪರಿಗಣಿಸಿದರೆ ಅನಾಹುತವಿದೆ. ನಾಗರಪಂಚಮಿ ತುಳುನಾಡಿನ ಆರಂಭದ ಜ್ಯೇಷ್ಠಹಬ್ಬ ನಾಗಾರಾಧನೆ ಸಂಸ್ಕೃತಿಯ ಭಾಗ. ಸ್ವಾಸ್ಥ್ಯ ಕಾಪಾಡುವುದಕ್ಕೆ ಸ್ವಚ್ಛವಾಗಿರಬೇಕು.
ಶಾರೀರಿಕ,ಮಾನಸಿಕ ಸ್ವಚ್ಛತೆಯಿಂದ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ಧರ್ಮವು ಅರ್ಥಪೂರ್ಣ ಬದುಕು ರೂಪಿಸಿಕೊಳ್ಳಲು ರಾಜಮಾರ್ಗವಾಗಿದೆ. ಯುವಕರು ರಾಷ್ಟ್ರಸೇನಾನಿಗಳಾಗುವುದರ ಜೊತೆಗೆ ಧರ್ಮ ಸೇನಾನಿಗಳಾಗಬೇಕಾಗಿದೆ.ಧರ್ಮ ಸಂರಕ್ಷಣೆಗೆ ಯುವಶಕ್ತಿ ಜಾಗೃತವಾಗುವುದು ಅನಿವಾರ್ಯ.ಬದುಕು ಯಾಂತ್ರಿಕವಾಗಬಾರದು.ಮೊಬೈಲ್,ಟಿ.ವಿ. ಇತರ ಆಧುನಿಕ ತಂತ್ರಜ್ಞಾನಗಳು ಅವಶ್ಯವಿದ್ದಷ್ಟೇ ಬಳಸಬೇಕು.ಅಧ್ಯಾತ್ಮಿಕ ಒಲವು ಇರಬೇಕು. ಆ ಮೂಲಕ ಸಂಸ್ಕೃತಿ ಸಂಸ್ಕಾರದ ಉಳಿವು ಸಾದ್ಯ ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಶ್ರೀ ಸಂಸ್ಥಾನದ ಜರಗಿದ ನಾಗರ ಪಂಚಮಿ ಮಹೋತ್ಸವ-ಸಾಮೂಹಿಕ ಆಶ್ಲೇಷಬಲಿಪೂಜೆಯ ಸಂದರ್ಭ ಸಂದೇಶ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಈ ಸಂದರ್ಭ ಉಪಸ್ಥಿತರಿದ್ದರು. ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಸ್ವಯಂ ಭೂ ನಾಗಸನ್ನಿಧಿಯಲ್ಲಿ ನಾಗತಂಬಿಲ, ಪಂಚಾಮೃತ ಅಭಿಷೇಕ ನಡೆಯಿತು.ನಿಡ್ಲೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ ಮೂಲಕಾಸುರ ಕಾಳಗ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.