ಅಜ್ಞಾನವೆಂಬ ರಾಕ್ಷಸನನ್ನು ದಹಿಸಿ ಜ್ಞಾನದ ಜ್ಯೋತಿಯನ್ನು ಬೆಳಗಿಸಿದ ದಿನ ದೀಪಾವಳಿ. ತಮ್ಮತನವನ್ನು ಮರೆಯದೇ ಸನಾತನ ಸಂಸ್ಕೃತಿಯನ್ನು ಬೆಳೆಸೋಣ. ಆಧುನಿಕತೆಯ ಭರದಲ್ಲಿ ಸನಾತನವನ್ನು ಮರೆಯಬೇಡಿ. ಸಂಸ್ಕಾರಯುತ ಬದುಕಿನಿಂದ ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮದಲ್ಲಿ ಸಂದೇಶ ನೀಡಿದರು.
ಈ ಸಂದರ್ಭ ಯೋಜನೆಯ ಮಂಗಳೂರು ತಾಲೂಕಿನ ಘಟಸಮಿತಿ ಪದಾಧಿಕಾರಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುರತ್ಕಲ್ ವಲಯದ ಸೇವಾದೀಕ್ಷಿತೆ ಸವಿತಾ ಉಳಿತಾಯ ಮನೋಭಾವ ಯಾಕಾಗಿ? ಎಂಬ ವಿಚಾರದ ಬಗ್ಗೆ ವಿಷಯ ಮಂಡಿಸಿದರು. ಹರ್ಷಿತಾ ಅವರು ಚಟುವಟಿಕೆಯನ್ನು ನಿರ್ವಹಿಸಿದರು. ಶ್ಲೋಕವನ್ನು ಧನಲಕ್ಷ್ಮಿ ಹಾಗೂ ಅಮೃತ ವಚನವನ್ನು ಮಮತಾ ನಿರ್ವಹಿಸಿದರು. ಬಂಟ್ವಾಳ ಮತ್ತು ಮಂಗಳೂರು ತಾಲೂಕಿನ ಸಿಬ್ಬಂದಿಗಳು ಭಗವದ್ಗೀತೆ ಅಭ್ಯಾಸ, ಪ್ರಾಣಾಯಾಮ, ಧ್ಯಾನ, ಹಾಗೂ ಭಜನೆಯನ್ನು ನೆರವೇರಿಸಿ ಕೊಟ್ಟರು.
ಬೆಳ್ತಂಗಡಿ ತಾಲೂಕಿನ ವಿಸ್ತರಣಾಧಿಕಾರಿಯಾದ ಯಶೋಧರ್ ಸಾಲ್ಯಾನ್ ಯೋಜನೆಯ ಮಾಸಿಕ ವರದಿ ಮಂಡಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕರಾದ ಟಿ. ತಾರಾನಾಥ ಕೊಟ್ಟಾರಿಯವರು ಯೋಜನೆಯ ಮಾಹಿತಿಯನ್ನು ನೀಡಿದರು. ಮುಲ್ಕಿ ವಲಯದ ಸಂಯೋಜಕಿಯಾದ ಸಾವಿತ್ರಿ ಸ್ವಾಗತಿಸಿ, ಮಂಗಳೂರು ವಲಯದ ಸಂಯೋಜಕಿ ಪ್ರತಿಭಾ ಕಾರ್ಯಕ್ರಮ ನಿರ್ವಹಿಸಿದರು. ಸುರತ್ಕಲ್ ವಲಯದ ಸಂಯೋಜಕಿ ಸುನಿತಾ ವಂದಿಸಿದರು. ವಿಟ್ಲ ಮಂಡಲದ ಪದಾಧಿಕಾರಿಗಳು ಹಾಗೂ ಯೋಜನೆಯ ವಿಸ್ತರಣಾಧಿಕಾರಿಗಳಾದ ಸುರೇಶ್ ಶೆಟ್ಟಿ ಮೊಗರೋಡಿ, ನವೀನ್ ಶೆಟ್ಟಿ ಮಂಗಳೂರು, ಸದಾಶಿವ ಅಳಿಕೆ ಹಾಗೂ ಮುರಳೀಧರ್ ಕಾರ್ಕಳ ಉಪಸ್ಥಿತರಿದ್ದರು.