ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ, ಮತ್ತು ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು ಇದರ ಆಶ್ರಯದಲ್ಲಿ ನಡೆದ ವಲಯ ಮಟ್ಟದ ಯೋಗಾಸನ ಸ್ಪರ್ಧೆಯನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರು ಉದ್ಘಾಟಿಸಿ ವಿಶ್ವಕ್ಕೆ ಯೋಗದ ಪರಿಚಯ ಮಾಡಿದ ಕೀರ್ತಿ – ಭಾರತಕ್ಕೆ ಸಲ್ಲುತ್ತದೆ. ಮನಸ್ಸು ಮತ್ತು ಶರೀರ ನಾಣ್ಯದ ಎರಡು ಮುಖಗಳಿದ್ದಂತೆ. ಎರಡೂ ಆರೋಗ್ಯಕರವಾಗಿರಬೇಕಾದರೆ ಯೋಗ ಮುಖ್ಯ. ಪತಂಜಲಿ ಮಹರ್ಷಿಗಳು ಯೋಗ ಸೂತ್ರವನ್ನು ಪರಿಚಯ ಮಾಡಿಸಿದರು. ಓಂ ಕಾರ ಎಂಬುದು ಅ,ಉ,ಮ ಕಾರಗಳ ಸಂಗಮವಾಗಿದೆ. ಬದುಕಿನಲ್ಲಿ ನಿನ್ನೆ-ಇವತ್ತು-ನಾಳೆ ನಗುವಿನಿಂದ ಕೂಡಿದ್ದರೆ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಸೋಲನ್ನು ಗೆಲುವನ್ನಾಗಿಸಿದರೆ ಬಾಳು ಸಾರ್ಥಕ. ಜೀವ-ದೇವನ ಸಂಬಂಧ ಭಾವನಾತ್ಮಕವಾಗಿ ಅಡಗಿದೆ, ಶಾಶ್ವತವಾದ ಆನಂದವನ್ನು ಆಧ್ಯಾತ್ಮದಲ್ಲಿ ಆನಂದಿಸಲು ಸಾಧ್ಯವಾಗುತ್ತದೆ, ಅರ್ಥಪೂರ್ಣ ಬದುಕಿಗೆ ಯೋಗ ಸಹಕಾರಿ, ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಯೋಗ ನಿರ್ವಹಿಸುತ್ತದೆ. ಹಾಗಾಗಿ ನಮ್ಮ ಬದುಕಿನಲ್ಲಿ ಯೋಗವನ್ನು ಅಳವಡಿಸಿಕೊಳ್ಳೋಣ ಎಂದು ಆಶೀರ್ವಚನವಿತ್ತರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮತ್ತು ಮಾಣಿಲ ಪ್ರೌಢಶಾಲೆಯ ದೈಹಿಕ ಶಿಕ್ಷಕ ಉಮಾನಾಥ ಶೆಟ್ಟಿ, ಕೇಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಸುರೇಶ ಶೆಟ್ಟಿ, ಮಿತ್ತನಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಶಿವಪ್ಪ ಗೌಡ, ಶ್ರೀ ಸತ್ಯಸಾಯೀ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ರಾಜೇಂದ್ರ ರೈ ಅಳಿಕೆ, ಜನತಾ ಪ್ರೌಢಶಾಲೆ ಅಡ್ಯನಡ್ಕ ಶಾಲೆಯ ದೈಹಿಕ ಶಿಕ್ಷಕ ಉದಯ ಕೃಷ್ಣ ಭಟ್, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಾಲಾ ಸಂಚಾಲಕ ಸೇರಾಜೆ ಗಣಪತಿ ಭಟ್, ಮುಖ್ಯಶಿಕ್ಷಕ ಜಯಪ್ರಕಾಶ ಶೆಟ್ಟಿ ಎ. ವೇದಿಕೆಯಲ್ಲಿದ್ದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಮುಖ್ಯಶಿಕ್ಷಕ ಜಯಪ್ರಕಾಶ ಶೆಟ್ಟಿ ಎ. ಸ್ವಾಗತಿಸಿದರು. ಸಹಶಿಕ್ಷಕಿ ವೇದಾವತಿ ಕಾರ್ಯಕ್ರಮ ನಿರೂಪಿಸಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಣುಕಾ ಎಸ್ ರೈ ವಂದಿಸಿದರು.