ದೇಶ ಕಟ್ಟುವ ಕಾರ್ಯಕ್ಕೆ ಹಲವು ಮಂದಿ ಪ್ರಯತ್ನ ಪಡುತ್ತಿದ್ದು, ಗಡಿ ಭಾಗದಲ್ಲಿ ಸೈನಿಕರಿಂದ ದೇಶದ ಸಂರಕ್ಷಣೆಯ ಕಾರ್ಯ ನಡೆಯುತ್ತಿದೆ. ಉಗ್ರರ ಉಪಟಳದಿಂದ ಸಂರಕ್ಷಣೆಯ ಕಾರ್ಯ ಕಷ್ಟಕರವಾಗಿದ್ದು, ಈ ಸಮಯದಲ್ಲಿ ತನ್ನನ್ನು ದೇಶಕ್ಕಾಗಿ ಅರ್ಪಣೆ ಮಾಡಿಕೊಂಡಿದ್ದಾರೆ. ದೇಶ ಸೇವೆ ಎಂಬ ಸಂತೋಷದ ಕಾರ್ಯದಲ್ಲಿ ತನ್ನನ್ನು ಅರ್ಪಣೆ ಮಾಡಿಕೊಳ್ಳಲು ಎದೆಗಾರಿಕೆ ಹಾಗೂ ಆತ್ಮ ವಿಶ್ವಾಸ ಇದ್ದುದರಿಂದ ದೇಶದ ಸಂರಕ್ಷಣೆಯಾಗಲು ಸಾಧ್ಯವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಸೋಮವಾರ ಉಗ್ರರೊಂದಿಗೆ ಹೋರಾಡಿ ಸಾವಿನ ದವಡೆಯಿಂದ ಪಾರಾಗಿ ಊರಿಗೆ ಮರಳಿದ ಮುಡಿಪ್ಪು ನಿವಾಸಿ ಸಂತೋಷ್ ಕುಲಾಲ್ ಅವರ ಮನೆಗೆ ಬೇಟಿ ನೀಡಿ ಅವರನ್ನು ಸನ್ಮಾನಿಸಿ – ಪ್ರೋತ್ಸಾಗಿಸಿ ಆಶಿರ್ವಚನ ನೀಡಿದರು.
ಸೈನಿಕರು ದೇಶದ ಸಂರಕ್ಷಣೆಯ ವಿಚಾರದಲ್ಲಿ ಬಹಳಷ್ಟು ಜಾಗೃತರಾಗಿರಬೇಕಾಗುತ್ತದೆ. ಮನೆಯವರಿಗೆ ಯಾವುದೇ ನೋವಾಗಬಾರದೆಂದು ದುಖಃ ದುಮ್ಮಾನಗಳನ್ನು ಮುಚ್ಚಿಟ್ಟು ರಾಷ್ಟ್ರ ಸೇವೆ ನಿರಂತವಾಗಿ ನಡೆಯಬೇಕೆಂದು ದೊಡ್ಡ ಮನಸ್ಸಿನಲ್ಲಿ ಮುನ್ನುಗಿದ್ದಾರೆ. ದೇಶ ಸೇವೆಗೆ ಮನೆ ಮಂದಿ ಪ್ರೋತ್ಸಾಹ ನೀಡಿದಾಗ ಗಟ್ಟಿಯಾಗಿ ನಿಲ್ಲಲು ಸಹಕಾರಿಯಾಗಿರುತ್ತದೆ. ದೇಶಕಟ್ಟುವ ಕಾರ್ಯಕ್ಕೆ ಇಡೀ ಸಮಾಜ ಸೈನಿಕರ ಹಿಂದೆ ಇದ್ದು, ಆದರ್ಶ ಸೇವೆಗೆ ಭಗವಂತನ ಕೃಪೆ ಸದಾ ಇರುತ್ತದೆ. ಎಲ್ಲರಿಗೆ ಸ್ಪೂರ್ಥಿಯಾಗಿರುವ ಸಂತೋಷ್ ಅವರು ಬೇಗನೆ ಗುಣಮುಖವಾಗಿ ದೇಶ ಸೇವೆ ಇನ್ನಷ್ಟು ಶಕ್ತಿ ತುಂಬಿಸಲಿ ಎಂದು ತಿಳಿಸಿದರು.
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಉಗ್ರರಿಂದ ಗುಂಡು ಹಾರಟ ನಡೆದು ಗಾಯಗೊಂಡರೂ ಲೆಕ್ಕಿಸದೆ ಹೋರಾಟ ಮಾಡಿ ಉಗ್ರರನ್ನು ಸದೆಬಡೆದಿರುವುದಕ್ಕೆ ಅವರನ್ನು ಅಭಿನಂಧಿಸಬೇಕು. ರಾಷ್ಟ್ರಕ್ಕೆ ಆಪತ್ತು ಬಂದಾಗ ತನ್ನ ದೇಹವನ್ನು ಪಣಕ್ಕೊಡ್ಡಿ ಕಾರ್ಯವನ್ನು ಮಾಡುವಂತಹವನನ್ನು ಸಮಾಜ ಗೌರವಿಸಬೇಕು. ಉಗ್ರರ ಹೋರಾಟದಲ್ಲಿ ಸಂತೋಷ ಅವರ ಕಾರ್ಯ ಜಿಲ್ಲೆಗೆ ಗೌರವ ಹಾಗೂ ಕೀರ್ತಿಯನ್ನು ತರುವ ಕಾರ್ಯ ಮಾಡಿದೆ. ಬೇಗ ಗುಣಮುಖರಾಗಿ ರಾಷ್ಟ್ರ ಸೇವೆಗೆ ಇನ್ನಷ್ಟು ಸಮಯ ಕೊಡುವಂತಾಗಲಿ ಎಂದು ಹೇಳಿದರು.
ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರು, ಅಮ್ಮೆಂಬಳ ಸಹಕಾರಿ ಬ್ಯಾಂಕ್ ಅಧ್ಯಕ್ಷ ಟಿ. ಜಿ ರಾಜಾರಾಮ ಭಟ್, ತಾಲೂಕು ಪಂಚಾಯಿತಿ ಸದಸ್ಯ ನವೀನ್ ಪಾಗಲ್ಪಾಡಿ, ಮುಖಂಡರಾದ ಜಗದೀಶ್ ಕೂವೆತ್ತಬೈಲು, ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ.ತಾರಾನಾಥ ಕೊಟ್ಟಾರಿ, ಜಯಂತ್ ಜೆ. ಕೋಟ್ಯಾನ್, ಚಂದ್ರಶೇಖರ, ವೇಣುಗೋಪಾಲ ಮಾರ್ಲ, ವಾಸದೇವ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.