ಲೌಕಿಕ ಮತ್ತು ಅಲೌಕಿಕ ಸಂಪತ್ತಿಗೆ ಅಧಿದೇವತೆ ಲಕ್ಷ್ಮೀದೇವಿ. ಕ್ಷೀರ ಸಾಗರವನ್ನು ದೇವ-ದಾನವರು ಮಥಿಸಿದಾಗ ಲಕ್ಷ್ಮೀ ಸಹಿತ ಹಲವಾರು ಸುವಸ್ತುಗಳು ಉದಿಸಿಬರುತ್ತದೆ. ಈ ಸಂದರ್ಭದಲ್ಲಿ ಕಠಿಣತೆಯ ವಿಷ ಆರಂಭದಲ್ಲಿ ಹೊರಬಂದು; ನಂತರ ಅಮೃತವೂ ಹೊರಗೆ ಬರುತ್ತದೆ. ಅದರಂತೆ ಅಮೃತತ್ತ್ವವನ್ನು ಪಡೆಯುವಲ್ಲಿ ಪರಿಶ್ರಮವಿದ್ದಂತೆ ಸಂಪತ್ತು ಗಳಿಕೆಯಾಗಬೇಕಾದರೆ ಪರಿಶ್ರಮ ಬೇಕು. ಧರ್ಮಪ್ರಜ್ಞೆಯಿಂದ ಸಂಪತ್ತಿನ ಗಳಿಕೆ-ಉಳಿಕೆ-ಬಳಕೆ ಮಾಡಿದಲ್ಲಿ ಅಪಾಯವಿರದು ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂದೇಶ ನೀಡಿದರು.
ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಧ್ಯಾನ ಮಂದಿರದಲ್ಲಿ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ವತಿಯಿಂದ ಜರಗಿದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಪೂಜೆಯ ಸಂದರ್ಭ ಆಶೀರ್ವಚನಗೈದ ಪೂಜ್ಯ ಶ್ರೀಗಳವರು ತ್ಯಾಗ, ಸೇವೆಗೆ ಮಹಾಲಕ್ಷ್ಮೀ ಮತ್ತು ಆಂಜನೇಯ ಸ್ವಾಮಿ ಆದರ್ಶರು. ತ್ಯಾಗಪೂರ್ಣ ಸೇವೆಯು ಭಗವಂತನಿಗೆ ಪ್ರಿಯವಾದುದು. ಉದ್ದೇಶವನ್ನರಿತು ಮಾಡುವ ವೃತ-ಪೂಜೆಗಳು ಮಹತ್ತ್ವಪೂರ್ಣವಾದುದು ಎಂದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಉಪಸ್ಥಿತರಿದ್ದರು. ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ಪೂಜೆ ನೆರವೇರಿತು. ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀ ಸರ್ವಾಣಿ ಪಿ. ಶೆಟ್ಟಿ ಉಪಸ್ಥಿತರಿದ್ದು, ಕಾರ್ಯದರ್ಶಿ ಶ್ರೀಮತಿ ಆಶಾ ಭಾಸ್ಕರ ಶೆಟ್ಟಿ, ಶ್ರೀಮತಿ ನಳಿನಿ ಜಿ.ಭಟ್ ಸೇರಾಜೆ, ಶ್ರೀಮತಿ ಶಾರದಾಮಣಿ ಎಸ್. ರೈ ಸಹಕರಿಸಿದರು. ಶ್ರೀಮತಿ ಭಾರತೀ ಅಜಿತ್ನಾಥ್ ಶೆಟ್ಟಿ ಪೂಜಾಸಂಕಲ್ಪಗೈದರು. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಒಡಿಯೂರು ಶ್ರೀ ವಿವಿಧೊದ್ದೇಶ ಸೌಹಾರ್ದ ಸಹಕಾರಿ ನಿಯಮಿತ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ, ಹಾಗೂ ಶ್ರೀ ಸಂಸ್ಥಾನದ ಅಭಿಮಾನಿ ಬಂಧುಗಳೆಲ್ಲರೂ ತನು-ಮನ-ಧನದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸಿದರು.