ಕನ್ಯಾನ, ಮಾ. 7: “ಭ್ರಷ್ಟಾಚಾರಮುಕ್ತ ಸಮಾಜ ನಿರ್ಮಾಣವಾಗಲು ಜನಸೇವಾ ಕೇಂದ್ರವು ಜನಪರವಾಗಿ ಕಾರ್ಯ ನಿರ್ವಹಿಸಬೇಕು. ಸಮಾಜದ ಉನ್ನತಿಗೆ ಪೂರಕವಾಗಿರಬೇಕು. ಪ್ರತಿಯೊಬ್ಬರು ರಾಷ್ಟ್ರ ಪ್ರೇಮ ಬೆಳೆಸಿ, ದುಶ್ಚಟಮುಕ್ತ ಸಮಾಜ ನಿರ್ಮಾಣವಾಗಬೇಕು, ಬದುಕು ಕೌಶಲಯುತವಾಗಿರಬೇಕು” ಎಂದು ಕನ್ಯಾನದ ಕೆಳಗಿನ ಪೇಟೆಯಲ್ಲಿರುವ ಒಡಿಯೂರು ಶ್ರೀ ಗುರುದೇವ ಐ.ಟಿ.ಐ.ಯಲ್ಲಿ ಶ್ರೀ ಒಡಿಯೂರು ಜನಸೇವಾ ಕೇಂದ್ರವನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ, ಪುತ್ತೂರು ಮೇದಿನಿ ಜನಸೇವಾ ಕೇಂದ್ರದ ಶ್ರೀಮತಿ ಸರಿತಾ ನವೀನ್ ಜನಸೇವಾ ಕೇಂದ್ರಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕನ್ಯಾನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ವಿಜಯಶಂಕರ ಆಳ್ವ ಮಿತ್ತಳಿಕೆ ಜನಸೇವಾ ಕೇಂದ್ರ ಮತ್ತು ಕಂದಾಯ ಇಲಾಖೆಯ ಸಂಬಂಧ ಮತ್ತು ಸಕಾಲ ಕಾಯಿದೆ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಶ್ರೀ ಎ. ಸುರೇಶ್ ರೈ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ, ಒಡಿಯೂರ್ದ ತುಳುಕೂಟದ ಅಧ್ಯಕ್ಷ ಶ್ರೀ ಯಶವಂತ ವಿಟ್ಲ, ಶ್ರೀ ಲಿಂಗಪ್ಪ ಗೌಡ ಪನೆಯಡ್ಕ, ಶ್ರೀಮತಿ ಸುನೀತಾ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಒಡಿಯೂರು ವೃತ್ತಿ ಶಿಕ್ಷಣ ವಿಭಾಗವು ನಡೆಸಿಕೊಟ್ಟಂತಹ ಟೈಲರಿಂಗ್ ಮತ್ತು ಕಂಪ್ಯೂಟರ್ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಶ್ರೀಗಳು ಪ್ರಮಾಣಪತ್ರ ವಿತರಿಸಿದರು. ಒಡಿಯೂರು ರಥೋತ್ಸವದಂದು ಐ.ಟಿ.ಐ. ವತಿಯಿಂದ ಐಸ್ಕ್ಯಾಂಡಿ ತಯಾರಿಕೆ ಮತ್ತು ಮಾರಾಟದಲ್ಲಿ ವಿಶೇಷ ರೀತಿಯಲ್ಲಿ ಸಹಕರಿಸಿದ ಕಿರಿಯ ತರಬೇತಿ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಶ್ರೀಗಳು ಫಲ ಮಂತ್ರಾಕ್ಷತೆ ನೀಡಿ ಗೌರವಿಸಿದರು.
ಐ.ಟಿ.ಐ. ಪ್ರಾಚಾರ್ಯ ಶ್ರೀ ಕರುಣಾಕರ ಎನ್.ಬಿ. ಸ್ವಾಗತಿಸಿ, ಪ್ರಸ್ತಾಪಿಸಿದರು. ಶ್ರೀ ಅಶ್ವತ್ಥ್ ವಂದಿಸಿದರು. ಶ್ರೀ ಜಯಂತ್ ಆಜೇರು ಕಾರ್ಯಕ್ರಮ ನಿರೂಪಿಸಿದರು.