ಕನ್ನಡ ಸಂಘ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರತಿಭೆ ಅನಾವರಣಗೊಳಿಸುವ ವೇದಿಕೆ. ಮೊಸರು ಕಡೆದಾಗ ಬೆಣ್ಣೆ ಹೇಗೆ ಲಭಿಸುತ್ತದೆಯೋ ಹಾಗೆಯೇ ವಿದ್ಯಾರ್ಥಿಗಳನ್ನು ಇಂತಹ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಾಗ ಅವರ ಪ್ರತಿಭೆಗಳು ಅನಾವರಣಗೊಳ್ಳುವುದು. ವೇಷ -ಭಾಷೆ ಒಂದಕ್ಕೊಂದು ಪೂರಕ. ಅದು ವ್ಯಕ್ತಿತ್ವಕ್ಕೆ ಇರುವ ಕನ್ನಡಿ. ಎಳವೆಯಿಂದಲೇ ಬರವಣಿಗೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ನಿರಂತರ ಅಭ್ಯಾಸವನ್ನು ಮಾಡಿ ಸಾಹಿತ್ಯ ಪ್ರಪಂಚಕ್ಕೆ ಕೊಡುಗೆಯನ್ನು ನೀಡಬಹುದು. ಭಾಷೆಯನ್ನು ಉಳಿಸಿ-ಬೆಳೆಸಿದಾಗ ಸಂಸ್ಕೃತಿಯು ಬೆಳೆಯುತ್ತದೆ. ಪದಗಳಿಗೆ ಸ್ವರಗಳು ಸೇರಿದಾಗ, ದೇಹದ ನಾಡಿಯಂತೆ ಸಾಹಿತ್ಯ ಚಲನಶೀಲವಾಗುತ್ತದೆ ಎಂದು ಶ್ರೀ ಸಾಧ್ವಿ ಶ್ರೀ ಮಾತಾನಂದಮಯೀಯವರು ಕನ್ನಡ ಸಂಘದ ಕನ್ನಡ ಧ್ವನಿ ಕಾರ್ಯಕ್ರಮವನ್ನು ದೀಪೋಜ್ವಲನದೊಂದಿಗೆ ಉದ್ಘಾಟಿಸಿ ಆಶೀರ್ವಚನವಿತ್ತರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಯಶವಂತ ವಿಟ್ಲ ಪತ್ರಿಕಾ ರಂಗದ ವಿಚಾರ ಸಂಕಿರಣವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಾಪಕರಾದ ನಾರಾಯಣ ಮಣಿಯಾಣಿ, ಶ್ರೀಮತಿ ರೇಣುಕಾ ಎಸ್. ರೈ, ಶ್ರೀಮತಿ ನಿವೇದಿತಾ, ಶ್ರೀಮತಿ ಭಾರತಿ, ಕು| ಪವಿತ್ರಾ, ಉದಯಕುಮಾರ್ ರೈ, ಕನ್ನಡ ಸಂಘದ ಅಧ್ಯಕ್ಷ ಮಾ| ಅವನೀಶ್ ಜಿ. ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಜಯಪ್ರಕಾಶ ಶೆಟ್ಟಿ ಎ. ಇವರು ಪ್ರಾಸ್ತವಿಕದೊಂದಿಗೆ ಸ್ವಾಗತಿಸಿದರು. ಜಿತೇಶ್ ಪಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕು. ಚೈತ್ರಾ ಧನ್ಯವಾದವಿತ್ತರು. ವಿದ್ಯಾರ್ಥಿಗಳಿಂದ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.