ಸೇವೆಯೆನ್ನುವುದು ಯಜ್ಞವಾಗಬೇಕು, ತ್ಯಾಗಸೇವೆಯಿಂದ ಮಾತ್ರ ಬದುಕು ಸಾಕಾರಗೊಳ್ಳುತ್ತದೆ. ತ್ಯಾಗಪೂರ್ಣವಾದ ಸೇವೆಯಿಂದ ಮಾತ್ರ ದೇವರನ್ನು ಕಾಣಲು ಸಾಧ್ಯ, ತನಗಾಗಿ ಏನನ್ನೂ ಬಯಸದೇ ಮಾಡುವ ಸೇವೆ ಸಾರ್ಥಕ್ಯವನ್ನು ಹೊಂದುತ್ತದೆ. ಇಂತಹ ಸೇವೆಗೆ ಮಾದರಿಯೆನಿಸಿದ ಸಂಸ್ಥೆ ಸೇವಾಂಜಲಿ ಟ್ರಸ್ಟ್. ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡಿದ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಸಂಯೋಜನೆಯಲ್ಲಿ ಆರೋಗ್ಯ ವಿಮಾಯೋಜನೆಯನ್ನು ಒಡಿಯೂರು ಶ್ರೀ ಗುರುದೇವ ವಿದ್ಯಾಸಂಸ್ಥೆಯಲ್ಲಿ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯ. ಇಂದಿನ ಕಾಲದಲ್ಲಿ ನಮಗೆ ಮುಖ್ಯವಾಗಿ ಬೇಕಾಗಿರುವುದು ಆನೆ ಅಂದರೆ ಆರೋಗ್ಯ ಮತ್ತು ನೆಮ್ಮದಿ. ಅದನ್ನು ಕಾಪಾಡಿಕೊಳ್ಳುವ ಹೊಣೆ ನಮ್ಮದು. ಎಂಬುದಾಗಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರು ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು ನಲ್ಲಿ ನಡೆಸಿದ ಸೇವಾಂಜಲಿ ಪ್ರತಿಷ್ಠಾನ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ನೀಡುವ ಆರೋಗ್ಯ ವಿಮಾ ಯೋಜನೆ ಕ್ಷೇಮ ಆರೋಗ್ಯ ಕಾರ್ಡು ನೋಂದಾವಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಾಧ್ವಿ ಶ್ರೀ ಮಾತಾನಂದಮಯೀಯವರು ಉಪಸ್ಥಿತರಿದ್ದರು. ಸೇವಾಂಜಲಿ ಪ್ರತಿಷ್ಠಾನದ ಮುಖ್ಯಸ್ಥರಾದ ಶ್ರೀ ಕೃಷ್ಣಕುಮಾರ್ ಪೂಂಜರವರು ಕ್ಷೇಮ ಆರೋಗ್ಯ ಕಾರ್ಡಿನ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸೇವಾಂಜಲಿ ಪ್ರತಿಷ್ಠಾನದ ಸದಸ್ಯರಾದ ಶ್ರೀಮತಿ ಉಮಾಚಂದ್ರಶೇಖರ, ಪೌಢಶಾಲಾ ಮುಖ್ಯಶಿಕ್ಷಕರಾದ ಶ್ರೀ ಜಯಪ್ರಕಾಶ ಶೆಟ್ಟಿ ಎ ಉಪಸ್ಥಿತರಿದ್ದರು.
ಶಾಲಾ ಸಂಚಾಲಕರಾದ ಶ್ರೀ ಸೇರಾಜೆ ಗಣಪತಿ ಭಟ್ ಸ್ವಾಗತಿಸಿದರು, ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಭಾರತಿ ಧನ್ಯವಾದವಿತ್ತರು, ಪ್ರೌಢಶಾಲಾ ಶಿಕ್ಷಕಿ ಕು. ಸವಿತಾ ಕಾರ್ಯಕ್ರಮ ನಿರೂಪಿಸಿದರು, ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು.