ವಸಂತ ಋತು ಎಂದರೆ ಮರಗಳು ಹೂ ಬಿಡುವ ಸಮಯ. ನಮ್ಮ ಜೀವನದಲ್ಲಿ ವಸಂತ ಋತು ಬರಲಿ ಎಂಬುದೇ ಹಾರೈಕೆ. ಏಕೆಂದರೆ ಈ ಸಮಯದಲ್ಲಿ ಸುಂದರ ವಾತಾವರಣವನ್ನು ಗಮನಿಸಬಹುದು. ಪುಟ್ಟ ಮಕ್ಕಳು ಸಹ ಅರಳುವ ಹೂವುಗಳಾಗಬೇಕು. ಅದಕ್ಕೆ ಸಂಸ್ಕಾರ ಎನ್ನುವುದು ಅಗತ್ಯ ಮನುಷ್ಯ ಜನ್ಮ ಎನ್ನುವುದು ಬಲಪೂರ್ಣವಾಗಬೇಕು. ರಾಷ್ಟ್ರ ನಿರ್ಮಾಣದ ಭವ್ಯ ಶಕ್ತಿ ಮಕ್ಕಳಲ್ಲಿದೆ. ವ್ಯಕ್ತಿ ವಿಕಾಸವಾದರೆ ರಾಷ್ಟ್ರ ವಿಕಾಸವಾಗುವುದು. ವ್ಯಕ್ತಿತ್ವ ವಿಕಸನಕ್ಕೆ ಇಂತಹ ಶಿಬಿರ ಪೂರಕ. ನಮಗೆ ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಶಾಲೆ ಎಂದರೆ ವಾಗ್ಧೇವಿಯ ಆರಾಧನೆ ಮಾಡುವ ಶ್ರದ್ಧಾ ಕೇಂದ್ರ. ವಿದ್ಯಾವಂತರಾದ ಹಾಗೇ ಅವರಲ್ಲಿ ವಿನಯವು ಮನೆ ಮಾಡಿದಾಗ ಆದರ್ಶ ಪ್ರಜೆಗಳಾಗುತ್ತಾರೆ. ಪುಟ್ಟ ಮಕ್ಕಳ ಪುಟ್ಟ ಹೆಜ್ಜೆಗೆ ದಿವ್ಯ ಶಕ್ತಿಯನ್ನು ನೀಡುವ ಕಾರ್ಯ ಇಂತಹ ಶಿಬಿರದಿಂದಾಗುವುದು ಎಂದು ಒಡಿಯೂರು ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಸಂಪನ್ನಗೊಂಡ ವಸಂತ ಶಿಬಿರದ ಉದ್ಘಾಟನೆಯನ್ನು ದೀಪೋಜ್ವಲನದ ಮುಖೇನ ನೆರವೇರಿಸಿದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವವರು ಆಶೀರ್ವದಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ, ಯಶವಂತ ವಿಟ್ಲ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಪನ್ಮೂಲ ವ್ಯಕ್ತಿಯಾದ ವಿಶ್ವನಾಥ ಶೆಟ್ಟಿ, ಬಂಟ್ವಾಳ ತಾಲೂಕು ವಿಸ್ತರಣಾಧಿಕಾರಿಯಾದ ಸದಾಶಿವ ಅಳಿಕೆ, ಹಾಗೂ ಶಿಬಿರಾರ್ಥಿಗಳಾದ ಸಂಪ್ರೀತ, ಅಬಿಜ್ಞಾ, ಧನ್ಯಶ್ರೀ ಉಪಸ್ಥಿತರಿದ್ದರು.