ತುಳುನಾಡು ಉಳಿಯಬೇಕಾದರೆ ನದಿಗಳು, ಕಾಡುಗಳು, ಗುಡ್ಡ ಬೆಟ್ಟಗಳು ಉಳಿಯಬೇಕು. ತುಳುನಾಡಿನ ಜನತೆ ಕೃಷಿಯನ್ನಾದರಿಸಿರುವುದರಿಂದ ಕೃಷಿ ಚಟುವಟಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಅನಿವಾರ್ಯತೆ ಇದೆ. ತುಳು ಸಂಸ್ಕೃತಿಗೆ ಜೇನಿನ ಹಾಗೆ ಎಲ್ಲದರ ಜೊತೆ ಬೆರೆಯುವ ಗುಣವಿದೆ. ತುಳುನಾಡಿನ ಜಾನಪದ ಆರಾಧನಾ ಕಲೆಗಳಿಗೆ ಧಕ್ಕೆಯಾಗದಂತೆ, ಅವಹೇಳನ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ತುಳುವರಿಗಿದೆ. ಬೆಟ್ಟದ ನೀರು ಹರಿದು ಬಂದರೆ ಮಾತ್ರ ಸಮುದ್ರದ ಸಂಪತ್ತು ವೃದ್ಧಿಯಾಗಲು ಸಾಧ್ಯ ಎಂದು ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಒಡಿಯೂರ್ದ ತುಳುಕೂಟ ಆಯೋಜಿಸಿದ್ದ ಆಟಿದ ಆಯನೊ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂದೇಶ ನೀಡಿದರು.
ಕಳಸೆಗೆ ಭತ್ತ ತುಂಬಿಸಿ ಹಿಂಗಾರ ಅರಳಿಸುವ ಮೂಲಕ ಉದ್ಘಾಟನೆಗೊಂಡ ಸಮಾರಂಭದಲ್ಲಿ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ, ಒಡಿಯೂರು ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕರಾದ ಶ್ರೀ ತಾರಾನಾಥ ಕೊಟ್ಟಾರಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ಶ್ರೀ ಎ. ಅಶೋಕ್ ಕುಮಾರ್, ಮಂಗಳೂರು ವಲಯಾಧ್ಯಕ್ಷ ಶ್ರೀ ಜಯಂತ್ ಜೆ. ಕೋಟ್ಯಾನ್, ಮಂಗಳೂರು ಸತ್ಸಂಗ ಸಮಿತಿಯ ಸಂಚಾಲಕ ಶ್ರೀ ವಾಸುದೇವ ಆರ. ಕೊಟ್ಟಾರಿ, ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿಗುತ್ತು, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷರಾದ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಶ್ರೀ ಯಶವಂತ್ ವಿಟ್ಲ, ವಿದ್ಯಾರ್ಥಿ ತುಳುಕೂಟದ ಅಧ್ಯಕ್ಷ ಮಾ| ಸನ್ಮಯ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಆಟಿ ಕಳಂಜ ನೃತ್ಯ ಪ್ರದರ್ಶನವು ನಡೆಯಿತು.
ಒಡಿಯೂರ್ದ ತುಳುಕೂಟದ ಅಧ್ಯಕ್ಷ ಶ್ರೀ ಎಚ್.ಕೆ. ಪುರುಷೋತ್ತಮ ಸ್ವಾಗತಿಸಿ, ಶ್ರೀ ಸುಬ್ರಹ್ಮಣ್ಯ ಒಡಿಯೂರು ವಂದಿಸಿದರು. ಒಡಿಯೂರು ಶಾಲಾ ಶಿಕ್ಷಕ ಶ್ರೀ ಶರತ್ಕುಮಾರ್ ಆಳ್ವ ಪ್ರಾರ್ಥನಾಗೀತೆ ಹಾಡಿದರು. ಮುಖ್ಯ ಶಿಕ್ಷಕ ಶ್ರೀ ಎ. ಜಯಪ್ರಕಾಶ್ ಶೆಟ್ಟಿ ಮತ್ತು ವಿದ್ಯಾರ್ಥಿನಿ ಕು| ಸನ್ನಿಧಿ ನಿರೂಪಿಸಿದರು.
ಸುಮಾರು 23 ಮಂದಿ ಹಲವು ಬಗೆಯ ತಿನಿಸುಗಳನ್ನು ತಯಾರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸುಮಾರು 123ಕ್ಕೂ ಅಧಿಕ ತಿಂಡಿ-ತಿನಸುಗಲಿದ್ದವು. ಶ್ರೀಮತಿ ಸುಗುಣಾ ಗೋಪಾಲಕೃಷ್ಣ ಅವರು 44 ಬಗೆಯ ತಿನಿಸುಗಳು, ಶ್ರೀಮತಿ ರೇಖಾ ಅವರು 15 ಹಾಗೂ ಶ್ರೀಮತಿ ವನಮಾಲಾ ಬಿ.ಮೇಲಂಟ ಅವರು 14 ಹಾಗೂ ಶ್ರೀಮತಿ ಸರಿತಾ ಡಿ. ಶೆಟ್ಟಿ 10ಬಗೆಯ ಆಟಿ ತಿಂಗಳ ತಿನಿಸುಗಳನ್ನು ಪ್ರದರ್ಶಿಸಿದರು. ಇವರನ್ನು ಪೂಜ್ಯ ಶ್ರೀಗಳವರು ಪುರಸ್ಕರಿಸಿದರು.