ಕನ್ಯಾನದ ಒಡಿಯೂರು ಶ್ರೀ ಗುರುದೇವ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯುಧ ಪೂಜಾ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ವಿವಿಧ ವೈಧಿಕ ಕಾರ್ಯಕ್ರಮಗಳೊಂದಿಗೆ ಒಡಿಯೂರು ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.
ಪೂಜ್ಯ ಶ್ರೀ ಗುರುದೇವಾನಂದ ಸ್ವಾಮಿಗಳವರು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ “ನವರಾತ್ರಿ ಆಚರಣೆಯ ಸಂದರ್ಭ ಆಯುಧ ಪೂಜೆಯನ್ನು ಮಾಡುವುದು ಹಿಂದಿನ ರಾಜರ ಕಾಲದಿಂದಲೇ ನಡೆದು ಬಂದ ಸಂಪ್ರದಾಯ. ವಿದ್ಯಾಧಿದೇವತೆ ಶಾರದೆಯ ಪೂಜೆ ಹಾಗೂ ಆಯುಧ ಪೂಜೆಗಳಿಂದ ವಿದ್ಯಾರ್ಥಿಗಳಲ್ಲಿ ಶಕ್ತಿ ಮತ್ತು ಯುಕ್ತಿಗಳೆರಡು ಉದ್ದೀಪನವಾಗುತ್ತದೆ. ವಿದ್ಯೆಯಿಂದ ವಿನಯ ಪ್ರಾಪ್ತವಾಗುತ್ತದೆ. ವಿನಯತೆಯಿದ್ದಾಗ ಸಕಲೈಶ್ವರ್ಯಗಳು ಲಭಿಸುತ್ತದೆ. ಉತ್ತಮ ಸಂಸ್ಕಾರವೇ ಇದಕ್ಕೆಲ್ಲ ಮೂಲ” ಎಂದು ಆಶೀರ್ವಚನ ನೀಡಿದರು.
ಸಂಸ್ಥೆಯ ಎಲ್ಲಾ ಕಾರ್ಯಗಾರ, ಯಂತ್ರೋಪಕರಣಗಳಿಗೆ ಪೂಜೆಯನ್ನು ಸಲ್ಲಿಸಿ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ವಿದ್ಯಾರ್ಥಿ ಮಂಜುಪ್ರಸಾದ್ ರಚಿಸಿದ ಪೂಜ್ಯ ಶ್ರೀಗಳವರ ಭಾವಚಿತ್ರವನ್ನು ಅನಾವರಣಗೊಳಿಸಿ ವಿದ್ಯಾರ್ಥಿಯನ್ನು ಪೂಜ್ಯ ಶ್ರೀಗಳವರು ಫಲಮಂತ್ರಾಕ್ಷತೆಯಿತ್ತು ಹರಸಿದರು.