“ಸಮಾಜದಲ್ಲಿ ಬದುಕಲು ವೃತ್ತಿಯ ಅವಶ್ಯಕತೆ ಇದೆ. ವೃತ್ತಿಯಲ್ಲಿ ಪರಿಶ್ರಮವಿದ್ದಾಗ ಅಸಾಧ್ಯವನ್ನೂ ಸಾಧ್ಯವಾಗಿಸಲಾಗುತ್ತದೆ. ವೃತ್ತಿಯ ಜೊತೆಗೆ ಅಧ್ಯಾತ್ಮದಲ್ಲಿ ಪ್ರವೃತ್ತರಾದಾಗ ಬದುಕು ಸುಂದರವಾಗುತ್ತದೆ. ತನ್ನನ್ನು ತಾನು ಅರಿತು ಬಾಳುವುದೇ ಅಧ್ಯಾತ್ಮ. ಆ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ. ಹುಟ್ಟು, ಸಾವಿನ ನಡುವೆ ಇರುವುದೇ ಜೀವನ. ಯಾಂತ್ರಿಕತೆಯ ಜೊತೆಗೆ ಹೊಂದಿಕೊಂಡು ಜೀವನ ನಡೆಸುವುದು ಇಂದಿನ ಅನಿವಾರ್ಯವಾಗಿದೆ. ಆರ್ಥಿಕ ಅವಶ್ಯಕತೆಗಳ ಪೂರೈಕೆಗೆ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡರೆ ಆದರ್ಶ ಬದುಕು ನಮ್ಮದಾಗುತ್ತದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಶ್ರೀ ಗುರುದೇವ ಕಲ್ಯಾಣ ಮಂಟಪ, ಕನ್ಯಾನ ಇಲ್ಲಿ ಜರಗಿದ ಒಡಿಯೂರು ಶ್ರೀ ಗುರುದೇವ ಐ.ಟಿ.ಐ.ನ 2018-19ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಮತ್ತು 2017-18ರ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಆಶೀರ್ವಚನಗೈದರು.
ಉಪಸ್ಥಿತರಿದ್ದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ ಅವರು ಮಾತನಾಡುತ್ತಾ ವಿದ್ಯಾಭ್ಯಾಸ, ಆರೋಗ್ಯದ ಬಗ್ಗೆ ಜೀವನದಲ್ಲಿ ಪ್ರತಿಯೊಬ್ಬರಲ್ಲಿಯೂ ಕಾಳಜಿ ಇರಬೇಕು. ನಿರುದ್ಯೋಗವನ್ನು ಹೋಗಲಾಡಿಸಿ ಗ್ರಾಮೀಣ ಭಾಗದ ಯುವಕರು ಉದ್ಯೋಗಸ್ಥರಾಗಿರಬೇಕೆನ್ನುವುದು ಪೂಜ್ಯ ಸ್ವಾಮೀಜಿಯವರ ಸಂಕಲ್ಪ” ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಕಂಪ್ಯೂಟರ್ ಅಕಾಡೆಮಿ, ಮಂಗಳೂರು ಇದರ ಅಧ್ಯಕ್ಷ ಶ್ರೀ ಬಿ. ರವೀಂದ್ರ ರೈ ಅವರು ಮಾತನಾಡುತ್ತಾ “ವಿದ್ಯಾರ್ಥಿಗಳು ವಿಜ್ಞಾನ ಮತ್ತು ಸುಜ್ಞಾನದ ಕೊಂಡಿಯಾಗಿ ಮೂಡಿಬರಲೆಂದು ಶುಭ ಹಾರೈಸಿ, ನಿರಂತರ ಪ್ರಯತ್ನವಿದ್ದರೆ ಮಾತ್ರವೇ ನಮ್ಮ ಲಕ್ಷ್ಯವನ್ನು ತಲುಪಲು ಸಾಧ್ಯ”ವೆಂದರು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕರಾದ ಶ್ರೀ ಟಿ. ತಾರಾನಾಥ ಕೊಟ್ಟಾರಿ ಅವರು ಮಾತನಾಡಿ “ಸ್ವಾವಲಂಬಿಗಳಾಗಿ ಬದುಕಲು ಕೈಗಾರಿಕಾ ತರಬೇತಿ ಸಂಸ್ಥೆ ಸಹಕಾರಿಯಾಗಲಿ” ಎಂದು ಶುಭ ಹಾರೈಸಿದರು.
ಸರಕಾರದಿಂದ ಲಭಿಸಿದ laptopನ್ನು SC/STವಿದ್ಯಾರ್ಥಿಗಳಿಗೆ ಹಾಗೂ ಅಲ್ಪಾವದಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯೋಪಾಧ್ಯಾಯರಾದ ಶ್ರೀ ಎ. ಜಯಪ್ರಕಾಶ ಶೆಟ್ಟಿ ಹಿರಿಯ ಪತ್ರಕರ್ತ ಶ್ರೀ ಯಶವಂತ ವಿಟ್ಲ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕ ಶ್ರೀ ಲಿಂಗಪ್ಪ ಗೌಡ ಪನೆಯಡ್ಕ, ಕನ್ಯಾನ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ಶ್ರೀ ಕೆ.ಪಿ. ರಘುರಾಮ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ನಮ್ಮ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಕರುಣಾಕರ ಎನ್.ಬಿ ಪ್ರಸ್ತಾವನೆಗೈದು, ಸ್ವಾಗತಿಸಿದರು. ಶ್ರೀ ಜಯಂತ್ ಆಜೇರು ವಂದಿಸಿದರು. ಶ್ರೀ ವಿನೋದ್ ಕಾನ ಇವರು ಕಾರ್ಯಕ್ರಮ ನಿರೂಪಿಸಿದರು.