ಪ್ರೌಢ ಎನ್ನುವುದು ಆರಂಭದ ಹೆಜ್ಜೆ. ವಿದ್ಯಾಭ್ಯಾಸ ಎನ್ನುವುದು ನಿತ್ಯ ನಿರಂತರ ಪ್ರಕ್ರಿಯೆ. ಪ್ರಾಥಮಿಕದಿಂದ ಪ್ರೌಢಶಾಲೆಗೆ ಬಂದಾಗ ಮಕ್ಕಳಲ್ಲಿ ಪ್ರಬುದ್ಧತೆ ಇರುವುದು ಸಹಜ. ಸ್ವಾಧ್ಯಾಯದಿಂದ ಸಾಧಿಸಲು ಅನುಕೂಲವಾಗುತ್ತದೆ. ಪರಿಶ್ರಮ ದಿಂದ ಉತ್ತಮ ಫಲಿತಾಂಶ ನಮ್ಮದಾಗಬಹುದು. ಆರ್ಥಿಕ ಗಳಿಕೆಯೇ ಮುಖ್ಯವಾಗಬಾರದು. ಅನುಕರಣೆಯೊಂದಿಗೆ ಅನುಸರಣೆಯೂ ಬೇಕು. ವಿಶ್ವವೇ ಒಂದು ವಿದ್ಯಾಲಯ. ಒತ್ತಡಕ್ಕೆ ಮಣಿಯದೆ ವಿದ್ಯೆಯೊಂದಿಗೆ ವಿನಯವನ್ನು ಮೈಗೂಡಿಸಿಕೊಳ್ಳಬೇಕು.
ಭ್ರಷ್ಟಾಚಾರ ಮುಕ್ತ ಸಮಾಜದೊಂದಿಗೆ ವ್ಯಸನಮುಕ್ತ ಸಮಾಜದ ನಿರ್ಮಾಣ ಆಗುವುದಕ್ಕೆ ಮಕ್ಕಳು ದೃಢ ಸಂಕಲ್ಪ ಮಾಡಬೇಕು. ದುಶ್ಚಟದ ಕಡೆಗೆ ಗಮನ ಕೊಡದೆ, ನಮ್ಮಲ್ಲಿರುವ ಮಾನವೀಯತೆಯ ಗುಣವನ್ನು ಮೆರೆಯಬೇಕು. ತಂದೆ-ತಾಯಿಯವರನ್ನು ಯಾವತ್ತೂ ದೂರ ಮಾಡಬೇಡಿ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಎಸ್.ಎಸ್.ಎಲ್.ಸಿ. ಮಕ್ಕಳ ಬೀಳ್ಕೊಡುಗೆ ಸಮಾರಂಭದಲ್ಲಿ ಆಶೀರ್ವಚನವಿತ್ತರು.
ಸಮಾರಂಭದಲ್ಲಿ ಸಾಧ್ವಿ ಶ್ರೀ ಮಾತಾನಂದಮಯಿಯವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಶಾಲಾ ಸಂಚಾಲಕರಾದ ಸೇರಾಜೆ ಗಣಪತಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮುಖ್ಯೋಪಾಧ್ಯಾಯರು ಶುಭಹಾರೈಸಿದರು. ತರಗತಿ ಶಿಕ್ಷಕರಾದ ಕು| ಮಂಜುಳಾ ಮತ್ತು ಶ್ರೀಮತಿ ಸುಪ್ರಭಾ ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಮುಂದಿಟ್ಟರು. ವಿದ್ಯಾರ್ಥಿ ಶ್ರವಣ್ರಾಜ್ ಸ್ವಾಗತಿಸಿ ವಿದ್ಯಾರ್ಥಿ ನಾಯಕ ಯತಿನ್ ಧನ್ಯವಾದವಿತ್ತರು. ಕು| ಶರಣ್ಯ ಕಾರ್ಯಕ್ರಮ ನಿರೂಪಿಸಿದರು.