“ಸಂಸ್ಕಾರ ಶಿಬಿರಗಳಿಂದ ಪ್ರತಿಭೆಗಳ ಅನಾರವಣ”
ಒಡಿಯೂರು ಶ್ರೀ ಸಂಸ್ಥಾನದಲ್ಲಿ ‘ಶರದೃತು ಸಂಸ್ಕಾರ ಶಿಬಿರ’ವನ್ನು ಉದ್ಘಾಟಿಸಿ
ಒಡಿಯೂರು ಶ್ರೀ ಆಶೀರ್ವಚನ
“ಉತ್ಸಾಹ ಮತ್ತು ಉಲ್ಲಾಸ ಇವೆರಡೂ ಬದುಕಿನಲ್ಲಿ ಬೇಕು. ಆಗ ನಮ್ಮಲ್ಲಿ ಖಿನ್ನತೆಗೆ, ಚಿಂತೆಗೆ ಅವಕಾಶವಿರುವುದಿಲ್ಲ. ನಮ್ಮನ್ನು ನಾವು ಸದ್ವಿಚಾರಗಳಲ್ಲಿ ತೊಡಗಿಸುವ ಜೊತೆಗೆ ನಿತ್ಯ ಚಟುವಟಿಕೆಗಳಲ್ಲಿ ನಿರತರಾದಾಗ ಪ್ರಬುದ್ಧರಾಗುತ್ತೇವೆ. ಸಂಸ್ಕಾರದಿಂದ ಜೀವನರಥಕ್ಕೊಂದು ಪಥ ದೊರೆಯುತ್ತದೆ. ನಮ್ಮ ಮಾತು ಮನಸ್ಸು ಜೊತೆಯಾಗಿರಬೇಕು” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನ ನೀಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠವು ಆಯೋಜಿಸಿದ ಶರದೃತು ಸಂಸ್ಕಾರ ಶಿಬಿರವನ್ನು ಉದ್ಘಾಟಿಸಿದ ಪೂಜ್ಯ ಶ್ರೀಗಳವರು “ಆತ್ಮ ಪ್ರಭಾವ ಬೀರುವ ಕಾರ್ಯ ಶಿಬಿರದ ಮೂಲಕ ಆಗುತ್ತದೆ. ನೈತಿಕ ಮೌಲ್ಯಗಳ ಉದ್ದೀಪನ ಜೀವನ ನಾಟಕಕ್ಕೆ ಪೂರಕವಾದದ್ದು ರಂಗಕಲೆ. ಯೋಗ ಮಾನಸಿಕ ಮತ್ತು ಶಾರೀರಿಕ ಸ್ವಾಸ್ಥ್ಯವನ್ನು ಕಾಪಿಡುತ್ತದೆ. ದೇಶದ ಮೌಲ್ಯ ಕೌಶಲ್ಯದಲ್ಲಿ ಅಡಗಿದೆ. ಶಿಬಿರದ ಮೂಲಕ ನೀವೆಲ್ಲರೂ ಕೌಶಲ್ಯಪೂರ್ಣರಾಗಿ” ಎಂದರು.
ಈ ಸುಸಂದರ್ಭ ಸಾಧ್ವಿ ಶ್ರೀ ಮಾತಾನಂದಮಯೀ ಸಾನ್ನಿಧ್ಯ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಗಿರಿ ಕಲ್ಲಡ್ಕ, ಮೈತ್ರೇಯಿ ಗುರುಕುಲದ ಭಗಿನಿ ಶ್ರೀಮತಿ ಭಟ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಣುಕಾ ಎಸ್. ರೈ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ವಿದ್ಯಾ, ಪಲ್ಲವಿ, ಶ್ರೀರಕ್ಷಾ, ಪೂಜಾಲಕ್ಷ್ಮೀ ಇವರ ಆಶಯಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ ಪ್ರಸ್ತಾವನೆಗೈದು ಸ್ವಾಗತಿಸಿದರು. ಗುರುಕುಲದ ಶಿಕ್ಷಕಿ ಕವಿತಾ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ದಿವ್ಯ ವಂದಿಸಿದರು.