“ಯಾವ ಕಾಲಕ್ಕೂ ನಾಶವಾಗದ ಧರ್ಮವೇ ಸನಾತನ ಹಿಂದೂ ಧರ್ಮ” – ಒಡಿಯೂರು ಶ್ರೀ
“ಮಕ್ಕಳು ಶ್ರೀಕೃಷ್ಣನ ವೇಷವನ್ನು ಹಾಕುವ ಜೊತೆಗೆ ರಾಮ-ಕೃಷ್ಣರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬದುಕಿನಲ್ಲಿ ಮನಮಂಥನದ ಕಾರ್ಯವಾಗಬೇಕು. ಮಾಧವ ಮಾನವನಾಗಿ ಅವತರಿಸಿ ನಮಗೆಲ್ಲ ಜೀವನಾದರ್ಶಗಳನ್ನು ತಿಳಿಸಿದ್ದಾನೆ. ಮಕ್ಕಳನ್ನು ಭಾರತ ರಥದ ಸಾರಥಿಗಳನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರದು. ಯಾವ ಕಾಲಕ್ಕೂ ನಾಶವಾಗದ ಧರ್ಮವೇ ಸನಾತನ ಹಿಂದೂ ಧರ್ಮ.ಭಾರತವೆಂದರೆ ಭಾವನೆಯಿಂದ ಕೂಡಿರುವಂತಹದ್ದು. ಭಾವನಾತ್ಮಕ ಸಂದೇಶ ನೀಡುವ ಭಾರತವು ವಿಶ್ವಕ್ಕೆ ಬೆಳಕು ಕೊಡುವ ಅಧ್ಯಾತ್ಮ ಸಂಪತ್ತಿನ ನಿಧಿ. ಭಾವ, ರಾಗ, ತಾಳ ಸೇರಿರುವುದೇ ‘ಭಾರತ’ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜೈ ಗುರುದೇವ ಕಲಾಕೇಂದ್ರ ಆಯೋಜಿಸಿದ್ದ ಮುದ್ದುಕೃಷ್ಣ ವೇಷ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದೇಶ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ದೀಪ ಪ್ರಜ್ವಲನೆಗೈದು ಸ್ಪರ್ಧೆಗೆ ಚಾಲನೆ ನೀಡಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಎಸ್.ರೈ, ಶಿಕ್ಷಕ ಶೇಖರ ಶೆಟ್ಟಿ ಬಾಯಾರು ತೀರ್ಪುಗಾರರಾಗಿ ಸಹಕರಿಸಿ ಉಪಸ್ಥಿತರಿದ್ದರು. ಕಲಾಕೇಂದ್ರದ ಅಧ್ಯಕ್ಷ ಸುಬ್ರಹ್ಮಣ್ಯ ಟಿ. ಸ್ವಾಗತಿಸಿ, ಒಡಿಯೂರುದ ತುಳುಕೂಟದ ಅಧ್ಯಕ್ಷ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.ಮುದ್ದುಕೃಷ್ಣ ವೇಷ ಸ್ಪರ್ಧೆ ಮೂರು ವರ್ಷದೊಳಗಿನ ವಿಭಾಗದಲ್ಲಿ ಶ್ರಾವ್ಯ ಶೆಟ್ಟಿ ಪಾವೂರು ಪ್ರಥಮ, ಶ್ರೀಯಾನ್ವಿ ಎಸ್.ಚಂದ್ರ ದ್ವಿತೀಯ, ಐದು ವರ್ಷದೊಳಗಿನ ವಿಭಾಗದಲ್ಲಿ ಶರಧಿ ಕೆ. ಪ್ರಥಮ, ಸಾನ್ವಿಕಾ ದ್ವಿತೀಯ, ರಾಧೆ-ಕೃಷ್ಣ ಸ್ಪರ್ಧೆಯಲ್ಲಿ ಲಯ ಮತ್ತು ಸಾನಿಧ್ಯ ಪ್ರಥಮ, ಪೂರ್ವಿ ಮತ್ತು ಅಭಿರಾಮ ದ್ವಿತೀಯ, ಯಶೋದೆ – ಕೃಷ್ಣ ಸ್ಪರ್ಧೆಯಲ್ಲಿ ಭುವನಾ ಹೆಗ್ಡೆ ಮತ್ತು ಭಾವನಾ ಹೆಗ್ಡೆ ಪ್ರಥಮ, ರಕ್ಷಿತಾ ಎಸ್. ಶೆಟ್ಟಿ ಮತ್ತು ಆದ್ಯ ಎಸ್. ಶೆಟ್ಟಿ ದ್ವಿತೀಯ ಬಹುಮಾನ ಪಡೆದರು.