“ಧರ್ಮಾನುಷ್ಠಾನದಿಂದ ಧರ್ಮದ ರಕ್ಷಣೆ”
ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹ ಸಮಾಪ್ತಿಯ ಧರ್ಮಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
ದ.26: “ದತ್ತ ಅವತಾರವೇ ವಿಶೇಷವಾದುದು. ಇದು ಜ್ಞಾನದ ಅವತಾರವಾಗಿರುತ್ತದೆ. ದತ್ತನನ್ನು ನಂಬಿದವರಿಗೆ ಎಲ್ಲವನ್ನು ನೀಡುವನು. ಜ್ಞಾನದ ಕೊರತೆಯಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಧರ್ಮ-ಸಂಸ್ಕೃತಿ ಜೊತೆಯಾಗಿ ಸಾಗಿದಾಗ ಬದುಕು ಹಸನಾಗುವುದು. ಧರ್ಮ ಸಂರಕ್ಷಣೆಯಾಗದಿದ್ದರೆ ಅಪಾಯವಿದೆ. ಧರ್ಮಾನುಷ್ಠಾನವಾದಾಗಲೇ ಧರ್ಮದ ರಕ್ಷಣೆಯಾಗುವುದು. ಧರ್ಮ ಅತೀ ಶ್ರೇಷ್ಠವಾದುದು. ಧರ್ಮಯುಕ್ತ ಸಮಾಜದಿಂದ ಅಪತ್ತು ಕಡಿಮೆ. ದೀಪ ನಂದಿಸುವುದು ನಮ್ಮ ಸಂಪ್ರದಾಯವಲ್ಲ. ದೀಪ ಹಚ್ಚುವುದು ಬಹಳಷ್ಟು ಶ್ರೇಷ್ಠವಾದುದು. ಅದು ಜಗತ್ತನ್ನು ಬೆಳಗುವಂತದ್ದು. ಸೂರ್ಯನಿಂದಲೇ ಇರುವಂತದ್ದು. ಧ್ವೇಷದಿಂದ ಯಾವುದನ್ನು ಸಾಧಿಸಲು ಸಾಧ್ಯವಿಲ್ಲ, ಪ್ರೀತಿ ಭಾವದಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯ” ಎಂದರು.
ಸಾಧ್ವಿ ಶ್ರೀ ಮಾತಾನಂದಮಯಿಯವರು ಉಪಸ್ಥಿತರಿದ್ದರು. ಉದ್ಯಮಿ ಶ್ರೀ ವಾಮಯ್ಯ ಬಿ.ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಪುಣೆ ಘಟಕದ ಅಧ್ಯಕ್ಷ ಶ್ರೀ ಪ್ರಭಾಕರ ಶೆಟ್ಟಿ, ಮುಂಬೈ ಘಟಕದ ಅಧ್ಯಕ್ಷ ಶ್ರೀ ದಾಮೋದರ ಎಸ್. ಶೆಟ್ಟಿ, ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಮುಂಬೈ ಘಟಕದ ಅಧ್ಯಕ್ಷೆ ಶ್ರೀಮತಿ ಶ್ವೇತಾ ಚಂದ್ರಹಾಸ ರೈ ಉಪಸ್ಥಿತರಿದ್ದರು.
ನಿರೂಪಕ, ಕಲಾವಿದರಾಗಿರುವ ಶ್ರೀ ಕದ್ರಿ ನವನೀತ ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಸಹಾಕಾರಿರತ್ನ ಲ| ಎ. ಸುರೇಶ್ ರೈ, ಪ್ರಗತಿಪರ ಕೃಷಿಕ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಶ್ರೀ ಪಿ. ಲಿಂಗಪ್ಪ ಗೌಡ, ನಿರ್ದೇಶಕ ಶ್ರೀ ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿಗುತ್ತು ಇವರಿಗೆ ಶ್ರೀ ಗುರುದೇವಾನುಗ್ರಹ ಪುರಸ್ಕಾರ ನೀಡಿ ಪೂಜ್ಯ ಶ್ರೀಗಳವರು ಆಶೀರ್ವದಿಸಿದರು.
ಈ ಸುಸಂದರ್ಭದಲ್ಲಿ ಕೊಂಬಿಲ ಶ್ರೀ ಉಗ್ಗಪ್ಪ ಶೆಟ್ಟಿ ಪ್ರಕಟಿಸಿದ ಕವಿರತ್ನ ಕಾಳಿದಾಸ ರಚಿತ ಮುಳಿಯ ಶಂಕರ ಭಟ್ ಕನ್ನಡ ಭಾವಾನುವಾದ ಮಾಡಿದ ‘ಶ್ಯಾಮಲ ದಂಡಕಮ್’ ಕೃತಿ ಹಾಗೂ ಶ್ರೀ ಸಂಸ್ಥಾನದ ಮುಖವಾಣಿ ‘ದತ್ತ ಪ್ರಕಾಶ’ ದ್ವೈಮಾಸಿಕ ಪ್ರತಿಕೆ, ಒಡಿಯೂರು ಸೌಹಾರ್ದ ಸೇವಾ ಸಹಕಾರಿ ಸಂಘದ ವಾರ್ಷಿಕ ಕ್ಯಾಲೆಂಡರನ್ನು ಪೂಜ್ಯ ಶ್ರೀಗಳವರು ಬಿಡುಗಡೆಗೊಳಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಒಡಿಯೂರು ಶ್ರೀ ವಿಕಾಸವಾಹಿನಿ ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಮಾಡಲಾಯಿತು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ ಆಶಯಗೀತೆ ಹಾಡಿದರು. ಶಿಕ್ಷಕ ಶ್ರೀ ಶೇಖರ ಶೆಟ್ಟಿ ಸ್ವಾಗತಿಸಿದರು. ಒಡಿಯೂರು ಶ್ರೀ ಗುರುದೇವ ಐ.ಟಿ.ಐ.ಯ ತರಬೇತುದಾರರಾದ ಶ್ರೀ ಜಯಂತ ಅಜೇರು ವಂದಿಸಿದರು. ಒಡಿಯೂರು ತುಳುಕೂಟದ ಅಧ್ಯಕ್ಷ ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು. ಬೆಳಗ್ಗೆ ಶ್ರೀದತ್ತಮಾಲಾಧಾರಿಗಳಿಂದ ನಾಮಸಂಕೀರ್ತನಾ ಶೋಭಾಯಾತ್ರೆ ನಡೆಯಿತು. ಮಧ್ಯಾಹ್ನ ವೇದಪಾರಾಯಣ, ಶ್ರೀ ಗುರುಚರಿತ್ರೆ ಪಾರಾಯಣ ಸಮಾಪ್ತಿ, ಶ್ರೀ ದತ್ತ ಮಹಾಯಾಗದ ಪೂರ್ಣಾಹುತಿ, ಕಲ್ಪೋಕ್ತ ಪೂಜೆ, ಮಹಾಪೂಜೆ ನಡೆಯಿತು. ಬಳಿಕ ಸಂಪ್ರದಾಯದಂತೆ ಪೂಜ್ಯ ಶ್ರೀಗಳವರಿಂದ ಮಧುಕರೀ ಜರಗಿತು. ಸಾಯಂಕಾಲ ರಂಗಪೂಜೆ, ಬೆಳ್ಳಿರಥೋತ್ಸವ, ಉಯ್ಯಾಲೆ ಸೇವೆ ಸಂಪನ್ನಗೊಂಡಿತು.
ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಪವನ ಕಲಾವಿದೆರ್ ಕುಡ್ಲ ಇವರಿಂದ ‘ತೂಯಿಲೆಕ ಅತ್ತ್’ ಹಾಸ್ಯಮಯ ನಾಟಕ ನಡೆಯಿತು.