“ನಾಗಾರಾಧನೆಯು ಅರಿವಿಲ್ಲದೆ ಸಲ್ಲಿಸುವ ಪ್ರಕೃತಿಯ ಪೂಜೆ”
ಶ್ರೀ ಸಂಸ್ಥಾನದಲ್ಲಿ ಜರಗಿದ ನಾಗರ ಪಂಚಮಿ ಮಹೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ದಿವ್ಯ ಸಂದೇಶ
ಆ. 21: “ನಾಗದೇವರಿಗೆ ಮಾಡುವ ಅಭಿಷೇಕವು ಅರಿವಿಲ್ಲದೆಯೇ ಸಲ್ಲಿಸುವ ಪ್ರಕೃತಿಯ ಪೂಜೆಯಾಗಿದೆ. ಪ್ರಕೃತಿಯನ್ನು ಬಿಟ್ಟು ಆರಾಧನೆ ಇಲ್ಲ. ವೇದಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.
ನಾಗನಲ್ಲಿ ವಿವಿಧ ಪ್ರಬೇಧಗಳನ್ನು ನಾವು ಕಾಣಬಹುದು. ನಾಗಾರಾಧನೆಯಲ್ಲಿ ವಿಶೇಷ ತತ್ವ ಅಡಗಿದೆ. ಎಲ್ಲದಕ್ಕೂ ಪ್ರೀತಿ ತುಂಬಿದ ಹೃದಯ ಬೇಕು. ಅದು ಇತರರನ್ನು ಆಕರ್ಷಿಸುತ್ತದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಶ್ರೀ ಸಂಸ್ಥಾನದಲ್ಲಿ ಜರಗಿದ ನಾಗರ ಪಂಚಮಿ ಮಹೋತ್ಸವ-ಸಾರ್ವಜನಿಕ ಆಶ್ಲೇಷ ಬಲಿಪೂಜೆಯ ಸಂದರ್ಭ ಸಂದೇಶ ನೀಡಿದರು.ಸಾಧ್ವೀ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ಇದೇ ಸಂದರ್ಭ ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿತು. ಬೆಳಿಗ್ಗೆ ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ತನುತಂಬಿಲ, ಪಂಚಾಮೃತಾಭಿಷೇಕ ಜರಗಿ ಬಳಿಕ ಮಹಾಪೂಜೆ ನೆರವೇರಿತು.ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಅಪರಾಹ್ಣ ಗಂಟೆ 3.00ರಿಂದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ.) ನಿಡ್ಲೆ ಇವರಿಂದ ‘ಭೀಮಾಂಜನೇಯ-ಕಾರ್ತಿಕೇಯ ಕಲ್ಯಾಣ’ ಯಕ್ಷಗಾನ ಪ್ರದರ್ಶನಗೊಂಡಿತು. ರಾತ್ರಿ ವಿಶೇಷ ರಂಗಪೂಜೆ, ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.