‘ಇರವಿನ ಅರಿವೇ ದೀಪಾವಳಿ’
ತಮಗೆಲ್ಲ ದೀಪಾವಳಿಯ ಶುಭಾಶಯಗಳು.
ದೀಪಾವಳಿ ಎಂದರೆ ದೀಪಗಳ ಮಾಲೆ. ಒಮ್ಮೆ ಸೂರ್ಯನು ಅಸ್ತಮಿಸುವ ಸಮಯದಲ್ಲಿ ಕೇಳುತ್ತಾನೆ – “ನಾನು ಅಸ್ತಮಿಸುತ್ತೇನೆ, ಮುಂದೆ ಬೆಳಕು ಕೊಡುವವರು ಯಾರು?” ಆಗ ಯಾರೂ ಮುಂದೆ ಬರಲಿಲ್ಲ. ಕೊನೆಗೆ ದೀಪ ಹೇಳುತ್ತದೆ – “ನಾನು ನನ್ನ ಸುತ್ತಮುತ್ತ ಬೆಳಕನ್ನು ಚೆಲ್ಲಬಲ್ಲೆ” ಎಂದಿತು. ಆದರೆ ದೀಪದಿಂದ ದೀಪ ಬೆಳಗಿದಾಗ ಒಂದಷ್ಟು ಬೆಳಕು ಎಲ್ಲೆಡೆ ಹಬ್ಬುತ್ತದೆ.
ದೀಪ ಅಂದರೆ ಬೆಳಕು. ಬೆಳಕು ಅಂದರೆ ಜ್ಞಾನ. ಅಜ್ಞಾನದ ಅಂಧಕಾರ ನಿವಾರಿಸಿ ಜ್ಞಾನ ಎಂಬ ಬೆಳಕನ್ನು ಮೂಡಿಸುವುದೇ ದೀಪ. ನಮ್ಮಲ್ಲಿ ಹುದುಗಿರುವ ಅಸುರೀ ಶಕ್ತಿಯನ್ನು ದೂರೀಕರಿಸಿ ಜ್ಞಾನದ ಬೆಳಕಿನಿಂದ ತುಂಬಿಕೊಂಡಾಗ ಅಂತರಂಗ ಬೆಳಗುತ್ತದೆ. ತ್ರಿವಿಕ್ರಮ ಸ್ವರೂಪಿ ದೇವನು ಬಲಿ ಚಕ್ರವರ್ತಿಯನ್ನು ಮೂರು ಹೆಜ್ಜೆಗಳ ಮೂಲಕ ಪಾತಾಳಕ್ಕೆ ತಳ್ಳುತ್ತಾನೆ. ಆ ಮೂರು ಹೆಜ್ಜೆಗಳೇ ಕಾಮ, ಕ್ರೋಧ, ಲೋಭ. ಇದು ಅತಿಯಾದಾಗ ಅಪಾಯ. ಅದರ ಇತಿಮಿತಿ ಕಾಪಿಡುವ ಇರವಿನ ಅರಿವು ನೀಡಿ ಜ್ಞಾನದ ಬೆಳಕನ್ನು ನೀಡುವುದೇ ದೀಪಾವಳಿ.
ನಾನು, ನನ್ನದು ಎಂಬ ಅಹಮಿಕೆಯನ್ನು, ಸ್ವಾರ್ಥವನ್ನು, ಅಜ್ಞಾನವನ್ನು ಹರಿದೊಗೆದರೆ ಮಾನವ ಜನ್ಮ ಸಾರ್ಥಕವಾಗುತ್ತದೆ. ನಮ್ಮೊಳಗೂ ಬೆಳಕಾಗೋಣ, ನಾವೆಲ್ಲ ಸುತ್ತಲೂ ಬೆಳಗುವ ದೀಪವಾಗೋಣ. ಬೆಳಕು ಮೂಡಿಸೋಣ. ನರಕಾಸುರನನ್ನು ವಧಿಸಿ ಹದಿನಾರು ಸಾವಿರ ಗೋಪಿಕಾ ಸ್ತ್ರೀಯರ ಬಂಧನ ಬಿಡಿಸಿ ಲೋಕಕ್ಕೆ ಬೆಳಕಾದ ಶ್ರೀಕೃಷ್ಣನ ಅರಿವಿನೊಂದಿಗೆ ದೀಪಾವಳಿ ಆಚರಿಸೋಣ.
ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್