ತುಳು ಭಾಷಾಭಿಮಾನ, ಸಂಸ್ಕೃತಿ, ಪ್ರೀತಿ ತುಳುವರ ಅಂತರ್ಯದೊಳಗೆ ಮೊಳೆಯಬೇಕು. ನಮ್ಮತನದ ಅವಲೋಕನ ನಡೆದಾಗ ತುಳು ಮರೆಯದೇ ಉಳಿಯುತ್ತದೆ. ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂಬ ದೃಷ್ಟಿಯಿಂದ ಪ್ರಯತ್ನಗಳು ನಡೆಯುತ್ತಿವೆ. ಹಳೆ ಬೇರನ್ನು ಮರೆಯದೆ ದೃಢಗೊಳಿಸುವ ಕಾರ್ಯವಾಗಬೇಕು. ತ್ಯಾಗ-ನಿಸ್ವಾರ್ಥ ಸೇವೆಯಿಂದ ಯಶಸ್ಸು ನಿಶ್ಚಿತ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ’ಶ್ರೀ ಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆ ೨೦೧೮’ ತುಳುನಾಡ್ದ ನುಡಿ-ನಡಕೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ತುಳುವರನ್ನು ’ತುಳುಸಿರಿ ಮಾನಾದಿಗೆ ಮಾಡಿ ಆಶೀರ್ವಚನ ನೀಡಿದರು.
ಪತ್ತನಾಜೆ ತುಳು ಸಿನೆಮಾ ನಿರ್ಮಾಪಕ ಶ್ರೀ ವಿಜಯಕುಮಾರ್ ಶೆಟ್ಟಿ ತೋನ್ಸೆ ಇವರು ಮಾತನಾಡಿ ನೈಜ ತುಳುವರಾಗಿ ತುಳುವನ್ನು ೮ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ಆಗಬೇಕಾಗಿದೆ. ಯುವಪೀಳಿಗೆಗೆ ಬಂಧುತ್ವ, ನೆಂಟಸ್ತಿಕೆ ಭಾವನೆಯನ್ನು ಉಳಿಸುವ ಕಾರ್ಯ ಧಾರ್ಮಿಕ ಶ್ರದ್ಧಾಕೇಂದ್ರಗಳಿಂದ ನಡೆಯುತ್ತಿದೆ ಎಂದರು.
ಸಮ್ಮೇಳನಾಧ್ಯಕ್ಷ ಡಾ| ಕನರಾಡಿ ವಾದಿರಾಜ ಭಟ್ ಅವರು ಮಾತನಾಡಿ ಅಧ್ಯಾತ್ಮ ಕ್ಷೇತ್ರದ ಮೂಲಕ ತುಳು ನಾಡು-ನುಡಿಯ ಉಳಿವಿನ ಪ್ರೇರಣೆಯಾಗಿದೆ. ತುಳುನಾಡಿನ ಸಂಸ್ಕೃತಿಯ ಉಳಿವಿನ ಬಗೆಗೆ ಜನರಲ್ಲಿ ಜಾಗೃತಿಯಾಗಬೇಕು. ಇಂತಹ ತುಳು ಸಮ್ಮೇಳನಗಳು ಇನ್ನಷ್ಟು ಪ್ರೇರಣೆಯಾಗಲಿ ಎಂದರು.
ಈ ಸಂದರ್ಭ ಪ್ರತಿಕೋದ್ಯಮ ಕ್ಷೇತ್ರದಲ್ಲಿ ಸೇವೆಗೈದ ಶ್ರೀ ಮಲಾರು ಜಯರಾಮ ರೈ, ಶಿಕ್ಷಣ ಕ್ಷೇತ್ರದಲ್ಲಿ ಸೇವೆಗೈದ ಶ್ರೀ ಹಾಜಬ್ಬ ಹರೇಕಳ, ದೈವಾರಾಧಕರಾದ ಶ್ರೀ ಲಕ್ಷ್ಮಣ ಯಾನೆ ಕಾಂತ ಕಣಂತೂರು, ಹೊರದೇಶದಲ್ಲಿ ತುಳು ಪ್ರಚಾರದಲ್ಲಿ ತೊಡಗಿದ್ದ ಶ್ರೀ ಬಾಲಕೃಷ್ಣ ಎಂ. ಸಾಮಗ ಮಲ್ಪೆ, ಬೆನ್ನಿ ಸಾಗುವಳಿಯಲ್ಲಿ ಶ್ರೀ ದೇರಂಬಳ ತ್ಯಾಂಪಣ್ಣ ಶೆಟ್ಟಿಯರಿಗೆ ’ತುಳುಸಿರಿ’ ಮಾನಾದಿಗೆ ನೀಡಿ ಪೂಜ್ಯ ಶ್ರೀಗಳವರು ಹರಸಿದರು.
ತುಳುನಾಡ್ದ ನುಡಿ-ನಡಕೆ ಕಾರ್ಯಕ್ರಮದ ಸಂಚಾಲಕ ಡಾ| ವಸಂತಕುಮಾರ ಪೆರ್ಲ ಠರಾವು ಮಂಡಿಸಿದರು. ಒಡಿಯೂರ್ದ ತುಳುಕೂಟದ ಅಧ್ಯಕ್ಷ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಬಿ.ಸಿ.ರೋಡ್ ಶಾಖೆಯ ವ್ಯವಸ್ಥಾಪಕ ಶ್ರೀ ನಿತ್ಯಾನಂದ ಶೆಟ್ಟಿ ಮನವಳಿಕೆ ಸ್ವಾಗತಿಸಿದರು. ಒಡಿಯೂರು ಶ್ರೀ ಐ.ಟಿ.ಐ.ನ ಪ್ರಾಚಾರ್ಯ ಶ್ರೀ ಕರುಣಾಕರ್ ಎನ್.ಬಿ., ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕಿ ಕು| ಚೈತ್ರಾ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಗ್ರಾಮ ಸಂಯೋಜಕಿ ಶ್ರೀಮತಿ ಕಾವ್ಯಲಕ್ಷ್ಮೀ, ಪ್ರಸಾದ ಸಮಿತಿ ಸಂಚಾಲಕ ಶ್ರೀ ಸುಖೇಶ್ ಭಂಡಾರಿ ಸನ್ಮಾನ ಪತ್ರ ವಾಚಿಸಿದರು. ವೇದಿಕೆ ಸಮಿತಿಯ ಸದಸ್ಯ ಶ್ರೀ ಮಾತೇಶ್ ಭಂಡಾರಿ ವಂದಿಸಿ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯ ಶಿಕ್ಷಕ ಶ್ರೀ ಜಯಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದ ಬಳಿಕ ಶ್ರೀಮತಿ ಪೂರ್ಣಿಮಾ ವೈ. ಶೆಟ್ಟಿ ನಿರ್ದೇಶನದ ಶ್ರೀ ಮಹಾಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ಮಂಡಳಿ, ಕಾಟಿಪಳ್ಳ ಇವರಿಂದ ’ಜಾಂಬವತಿ ಕಲ್ಯಾಣ’ ತುಳು ಯಕ್ಷಗಾನ ಪ್ರದರ್ಶನಗೊಂಡಿತು.