“ರಕ್ತದಾನ ಎಂದರೆ ಅದು ಜೀವದಾನವಾಗಿದೆ”
ಪೂಜ್ಯ ಶ್ರೀಗಳ ಜನ್ಮದಿನೋತ್ಸವ – ಗ್ರಾಮೋತ್ಸವದ ಹಿನ್ನೆಲೆ ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ಬೃಹತ್ ಆರೋಗ್ಯ ತಪಾಸಣೆ-ರಕ್ತದಾನ ಶಿಬಿರ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಜು.16: “ರಾಷ್ಟ್ರೀಯ ಆದರ್ಶಗಳೆಂದರೆ ಸೇವೆ ಮತ್ತು ತ್ಯಾಗ. ತ್ಯಾಗ ತುಂಬಿದ ಸೇವೆ ಭಗವಂತನಿಗೆ ಪ್ರಿಯವಾದುದು. ಜನಪರ ಸೇವೆಗಳು ರೂಪುಗೊಂಡಾಗ ಹಲವರಿಗೆ ಉಪಕಾರಿಯಾಗುತ್ತದೆ. ಸೇವಾ ಮನೋಭಾವನೆ ಎಲ್ಲರಲ್ಲೂ ಮೂಡಿಬರಬೇಕಿದೆ. ರಕ್ತದಾನ ಎಂದರೆ ಅದು ಜೀವದಾನವಾಗಿದೆ. ಸಮಾಜಕ್ಕಾಗಿ ನಮ್ಮನ್ನು ತೊಡಗಿಸಿಕೊಳ್ಳುವ ಕೆಲಸವಾಗಬೇಕು. ನಗುಮುಖದ ಸೇವೆ ನಮ್ಮಲ್ಲಿರಬೇಕು. ಇಂತಹ ಕಾರ್ಯಕ್ರಮಗಳನ್ನು ಎಲ್ಲರೂ ಸದುಪಯೋಗ ಪಡಿಸಿಕೊಂಡಾಗ ಶಿಬಿರ ಸಾರ್ಥಕವಾಗುತ್ತದೆ. ರೋಗ ಬಂದ ಮೇಲೆ ಔಷಧ ಹುಡುಕುವ ಮೊದಲು ರೋಗ ಬರುವ ಮೊದಲೇ ಜಾಗೃತರಾಗಬೇಕು. ಎಲ್ಲದಕ್ಕೂ ಮನಸ್ಸು ಕಾರಣವಾಗಿದೆ. ಬದುಕಿನ ಬಂಧನದ ಬಿಡುಗಡೆಗೆ ಆಧ್ಯಾತ್ಮ ಪ್ರಮುಖ ಪಾತ್ರ ವಹಿಸುತ್ತದೆ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕಾರ್ಯಕ್ರಮ ನಮ್ಮದಾಗಬೇಕು” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಗ್ರಾಮೋತ್ಸವ 2023ರ ಪ್ರಯುಕ್ತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ., ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ಯುವ ಸೇವಾ ಬಳಗ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ವತಿಯಿಂದ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು, ಒನ್ಸೈಟ್ ಎಸ್ಸಿಲಾರ್ ಲಕ್ಸೋಟಿಕಾ ಫೌಂಡೇಶನ್,
ಬೆಂಗಳೂರು, ನೇತ್ರಜ್ಯೋತಿ ಚ್ಯಾರಿಟೇಬಲ್ ಟ್ರಸ್ಟ್, ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಆಯುಷ್ ಇಲಾಖೆ ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ), ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಮಂಗಳೂರು ಸಹಯೋಗದಲ್ಲಿ ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಏರ್ಪಡಿಸಿದ್ದ ‘ಬೃಹತ್ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ, ಉಚಿತ ಕನ್ನಡಕ ವಿತರಣೆ – ಬೃಹತ್ ರಕ್ತದಾನ ಶಿಬಿರ – ಆಯುರ್ವೇದಿಕ್ ಆರೋಗ್ಯ ತಪಾಸಣೆ – ಚಿಕಿತ್ಸಾ ಶಿಬಿರ’ವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀಗಳ ಜನ್ಮದಿನೋತ್ಸವ-ಗ್ರಾಮೋತ್ಸವ-2023ರ ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಲಾಯಿತು.ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ವಿಭಾಗದ ಮುಖ್ಯಸ್ಥರಾದ ಡಾ. ಶರತ್ ಕುಮಾರ್ ರಾವ್ ಜೆ., ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಡಾ. ಕೆ.ಆರ್. ಕಾಮತ್, ಆಯುಷ್ ಆರೋಗ್ಯದ ವೈದ್ಯಾದಿಕಾರಿ ಡಾ. ಹೇಮವಾಣಿ, ಪ್ರಸಾದ್ ನೇತ್ರಾಲಯದ ಡಾ. ವೃಂದ, ವೆನ್ಲಾಕ್ ಆಸ್ಪತ್ರೆಯ ವಿಕಲಚೇತನದ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಶ್ರೀ ಎನ್.ಬಿ. ಬಸವರಾಜ್, ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಉಝ್ಮ ಫಾತಿಮಾ ಜಾಫರ್, ಬೆಂಗಳೂರು ಒನ್ ಸೈಟ್ ಎಸ್ಸಿಲಾರ್ ಲಕ್ಸೋಟಿಕ್ ಫೌಂಡೇಶನ್ನ ಮುಖ್ಯ ವ್ಯವಸ್ಥಾಪಕರಾದ ಶ್ರೀ ಧರ್ಮಪ್ರಸಾದ್ ರೈ, ಒಡಿಯೂರು ಶ್ರೀ ವಿವಿದೋದ್ಧೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಎ. ಸುರೇಶ್ ರೈ, ಒಡಿಯೂರು ಗ್ರಾಮವಿಕಾಸ ಯೋಜನೆಯ ಯೋಜನಾಧಿಕಾರಿ ಶ್ರೀ ಕಿರಣ್ ಉರ್ವ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶ್ರೀಮತಿ ರೇಣುಕಾ ಎಸ್. ರೈ ಪ್ರಾರ್ಥಿಸಿದರು. ಶ್ರೀ ಯಶವಂತ ವಿಟ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಾತೇಶ್ ಭಂಡಾರಿ ವಂದಿಸಿದರು.