ಭಾಷೆಯ ಹಿಂದೆ ಸಂಸ್ಕೃತಿ ಇದೆ. ಸಂಸ್ಕರಿಸಲ್ಪಟ್ಟದ್ದೆ ಸಂಸ್ಕೃತಿ. ನಮ್ಮ ಬದುಕು ಸುಸಂಸ್ಕೃತವಾಗಬೇಕಾದರೆ ಸಂಸ್ಕಾರ ಬೇಕು. ಪ್ರಕೃತಿಯ ಗುಣ ಬದಲಾವಣೆ. ಸಂಸ್ಕೃತಿ ಬದಲಾಗುವುದಿಲ್ಲ. ಅದು ಉಳಿಯುವಂತದ್ದು. ವ್ಯಕ್ತಿಯ ನಡೆ- ನುಡಿ ಚೆನ್ನಾಗಿದ್ದಲ್ಲಿ ಸತ್ಕರ್ಮಗಳು ನಡೆಯುತ್ತದೆ. ನಡೆ-ನುಡಿಯಲ್ಲಿಯೇ ಧರ್ಮದ ಮರ್ಮ ಅಡಗಿದೆ ಎಂಬುದಾಗಿ ಪರಮಪೂಜ್ಯ ಒಡಿಯೂರು ಶ್ರೀಗಳವರು ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಈ ಸಂದರ್ಭ ಯೋಜನೆಯ ಬೆಳ್ಳಾರೆ ವಲಯ ಘಟಸಮಿತಿ ಪದಾಧಿಕಾರಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೋಳ್ಪಾಡಿ ಘಟಸಮಿತಿ ಕಾರ್ಯದರ್ಶಿ ವಾರಿಜಾಕ್ಷಿ ಭಾರತೀಯ ಜೀವನ ಪದ್ಧತಿ ಎಂಬ ವಿಚಾರದ ಬಗ್ಗೆ ವಿಷಯ ಮಂಡಿಸಿದರು. ಮುಂಡುಗಾರು ಘಟಸಮಿತಿ ಕಾರ್ಯದರ್ಶಿ ಶೋಭ ಅವರು ಚಟುವಟಿಕೆಯನ್ನು ನಿರ್ವಹಿಸಿದರು. ಎಡಮಂಗಲ ಘಟಸಮಿತಿ ಅಧ್ಯಕ್ಷರಾದ ಲತಾ ಪುಣ್ಯಕೋಟಿಯ ಕಥೆ ಹೇಳಿದರು. ಸೇವಾದೀಕ್ಷಿತೆ ನವೀನ ಕುಮಾರಿ ಶ್ಲೋಕ ಮತ್ತು ಅಮೃತ ವಚನವನ್ನು ನಿರ್ವಹಿಸಿದರು. ಸುಳ್ಯ ತಾಲೂಕಿನ ಸಿಬ್ಬಂದಿಗಳು ಭಗವದ್ಗೀತೆ ಅಭ್ಯಾಸ, ಪ್ರಾಣಾಯಾಮ, ಧ್ಯಾನ, ಹಾಗೂ ಭಜನೆಯನ್ನು ನೆರವೇರಿಸಿಕೊಟ್ಟರು.
ಬಂಟ್ವಾಳ ತಾಲೂಕಿನ ವಿಸ್ತರಣಾಧಿಕಾರಿಯಾದ ಸದಾಶಿವ ಅಳಿಕೆ ಯೋಜನೆಯ ಮಾಸಿಕ ವರದಿ ಮಂಡಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕರಾದ ಟಿ.ತಾರಾನಾಥ ಕೊಟ್ಟಾರಿಯವರು ಯೋಜನೆಯ ಕಾರ್ಯಗಳ ಮಾಹಿತಿಗಳನ್ನು ನೀಡಿದರು. ಸೇವಾದೀಕ್ಷಿತೆ ಜಯಶ್ರೀ ಸ್ವಾಗತಿಸಿ, ಬೆಳ್ಳಾರೆ ವಲಯದ ಸಂಯೋಜಕಿ ಗೀತಾ ಕಾರ್ಯಕ್ರಮ ನಿರ್ವಹಿಸಿದರು. ಸೇವಾದೀಕ್ಷಿತೆ ರೀತಾ ವಂದಿಸಿದರು. ವಿಟ್ಲ ಮಂಡಲದ ಪದಾಧಿಕಾರಿಗಳು ಹಾಗೂ ಯೋಜನೆಯ ಸಂಪನ್ಮೂಲ ವ್ಯಕ್ತಿಯಾದ ವಿಶ್ವನಾಥ ಶೆಟ್ಟಿ, ವಿಸ್ತರಣಾಧಿಕಾರಿಗಳಾದ ಸುರೇಶ್ ಶೆಟ್ಟಿ ಮೊಗರೋಡಿ, ನವೀನ್ ಶೆಟ್ಟಿ ಮಂಗಳೂರು, ಯಶೋಧರ್ ಸಾಲ್ಯಾನ್ ಹಾಗೂ ಮುರಳೀಧರ್ ಕಾರ್ಕಳ ಉಪಸ್ಥಿತರಿದ್ದರು.