“ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂಬಂತೆ ತಾನು ಜನಿಸಿದ ನೆಲದ ಕೀರ್ತಿಯನ್ನು ದೇಶದ ಉತ್ತುಂಗದ ಶಿಖರಕ್ಕೆ ವ್ಯಾಪಿಸುವಂತೆ ಮಾಡಿದ ಅವಧೂತ ಪರಂಪರೆಯ ಅಪ್ರತಿಮ ಸಾಧಕ ಒಡಿಯೂರಿನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು. ತಾನು ಆತ್ಮಾನಂದದ ಸಂತೋಷವನ್ನು ಅನುಭವಿಸುವ ಜೊತೆಗೆ ಸಮಾಜದ ಬಂಧುಗಳಲ್ಲಿ ಆತ್ಮಜಾಗೃತಿಯನ್ನು ಉದ್ದೀಪನಗೊಳಿಸಿ ವಿಶ್ವಮಾನವ ಧರ್ಮದ ಪರಿಕಲ್ಪನೆಯಲ್ಲಿ “ಕ್ರಣ್ವಂತೋ ವಿಶ್ವಮಾರ್ಯಂ” ಎಂಬಂತೆ ಎಲ್ಲರಲ್ಲೂ ದೈವೀಶಕ್ತಿ ಜಾಗೃತಿಯೊಂದಿಗೆ ಸಾಮರಸ್ಯ ಸಮಾಜದ ಬೆಸುಗೆಗಾಗಿ ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಮೂಲಕ ಒಡಿಯೂರು ಶ್ರೀ ಗುರುದೇವ ಪಬ್ಲಿಕ್ ಚ್ಯಾರಿಟೇಬಲ್ ಟ್ರಸ್ಟ್ ನ್ನು ಅನುಷ್ಠಾನಕ್ಕೆ ತಂದು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ಎಂಬ ಪಂಚಮುಖಿ ಸೇವಾಕಾರ್ಯವನ್ನು ಹಮ್ಮಿಕೊಂಡು ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆಯ ವೈಜ್ಞಾನಿಕ ಯುಗದ ಅಜ್ಞಾನದ ಅಂಧಕಾರದಲ್ಲಿ ದಾರಿ ಕಾಣದೆ ತೊಳಲಾಡುವ ಮಾನವ ಜನಾಂಗಕ್ಕೆ ಸತ್ಪತದ ಮಾರ್ಗದರ್ಶನ ಮಾಡುವ ಪರಮ ಗುರುಗಳಾಗಿ “ನಾನು, ನನ್ನದು, ನಿನ್ನಿಂದಾದುದು ಶೂನ್ಯವಾಗಿರಲಿ” ಎಂಬ ಅರಿವನ್ನು ಮೂಡಿಸಿ ಸ್ವಾವಲಂಬಿ ಸಮಾಜದಿಂದ ಮಾತ್ರವೇ ಸಶಕ್ತ ರಾಷ್ಟ್ರ ನಿರ್ಮಾಣ ಸಾಧ್ಯ ಎಂಬುದನ್ನು ಅರಿತು ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯನ್ನು ಅನುಷ್ಠಾನಕ್ಕೆ ತಂದರು.
ಸಂಸ್ಕಾರ, ಸಹಕಾರ, ಸಂಘಟನೆ, ಸಮೃದ್ಧಿ ಎಂಬ ಚತುಷ್ಪತದೊಂದಿಗೆ ತುಳುನಾಡಿನಾದ್ಯಂತ (ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆ) ಸಂಸ್ಕಾರಯುತ ಸಮಾಜದ ನಿರ್ಮಾಣಕ್ಕೆ ಬುನಾದಿಯಾಗಿದೆ.

ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಉದಯ:
2001 – ಪೂಜ್ಯ ಶ್ರೀಗಳ ಜನ್ಮದಿನೋತ್ಸವ ಗ್ರಾಮೋತ್ಸವದಂದು ಶ್ರೀ ಗುರು ಸಮರ್ಥ ವಿವೇಕಾನಂದ ಮುನಿಗಳ ದಿವ್ಯ ಹಸ್ತದಿಂದ ಚಾಲನೆ
ದಿ.ಸತ್ಯಗಣಪತಿ ಪಂಬತ್ತಾಜೆ ಇವರ ನೇತೃತ್ವದಲ್ಲಿ ಕರೋಪಾಡಿ, ಕನ್ಯಾನ, ಅವಳಿ ಗ್ರಾಮಗಳಲ್ಲಿ ಗುರು ಬಂಧುಗಳ ಗುರುತಿಸುವಿಕೆ ಸಂಸ್ಕøತಿ-ಸಂಸ್ಕಾರ ಕಾರ್ಯಕ್ರಮದೊಂದಿಗೆ ವ್ಯಕ್ತಿತ್ವ ವಿಕಸನ ಶಿಕ್ಷಣ, ಗ್ರಾಮ ಸ್ವಚ್ಚತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.ಧ್ಯಾನ, ಪ್ರಾಣಾಯಾಮ, ಯೋಗ, ಭಜನೆ, ಸತ್ಸಂಗ ಮೂಲಕ ಸಂಸ್ಕಾರಯುತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

2006 – ಸನಾತನ ಸಂಸ್ಕಾರ ಸಂಕಲ್ಪ ಅಭಿಯಾನಕ್ಕೆ ಚಾಲನೆ:
ಸಮಾಜದಲ್ಲಿರುವ ಜಾತಿ, ಮತ, ಪಕ್ಷ, ಪಂಗಡ, ಮೇಲು, ಕೀಳು, ಸ್ಪರ್ಶ್ಯ, ಅಸ್ಪರ್ಶ್ಯ, ಉಚ್ಚ, ನೀಚ ಎಂಬ ತಾರತಮ್ಯವನ್ನು ತೊರೆದು ಎಲ್ಲರಲ್ಲೂ ಸಮಾನ ಅಂಶವಾದ ಆತ್ಮ ತತ್ವದ ಜಾಗೃತಿಗಾಗಿ ನಮ್ಮ ಸನಾತನ ಸಂಸ್ಕೃತಿಯ ಉದ್ದೀಪನಕ್ಕಾಗಿ ಕೌಟುಂಬಿಕ, ಸಾಮಾಜಿಕ, ಧಾರ್ಮಿಕ ಬದ್ದತೆಗಾಗಿ, ಸ್ವದೇಶಿ ಆಹಾರ ಪದ್ಧತಿ, ಉಡುಗೆ-ತೊಡುಗೆ, ಸಮಾಜದ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸುಸಂಸ್ಕೃತ ಬಂಟ್ವಾಳ ಸಮೃದ್ಧ ಬಂಟ್ವಾಳ ಎಂಬ ಧ್ಯೇಯವಾಗಿ ಬಂಟ್ವಾಳ ತಾಲೂಕಿನ 84 ಗ್ರಾಮಗಳಲ್ಲಿ ಸಂಸ್ಕಾರೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಸುಮಾರು 1 ಲಕ್ಷ ಭಗವದ್ಗೀತೆ ಪ್ರತಿಗಳನ್ನು ವಿತರಿಸಿ ಧ್ಯಾನ, ಪ್ರಾಣಾಯಾಮ, ಯೋಗ, ಭಜನೆ, ಸತ್ಸಂಗ ರೂಪಕಗಳ ಮೂಲಕ ವ್ಯಕ್ತಿ ಸಂಸ್ಕಾರ ನೀಡುವುದರೊಂದಿಗೆ ಬದುಕು ಶಿಕ್ಷಣದ ಅರಿವು ಮೂಡಿಸಲಾಗಿದೆ. ಪೂಜ್ಯ ಶ್ರೀಗಳವರು ಉಪೇಕ್ಷಿತ ವರ್ಗದ ಜನರ ಮನೆ ಭೇಟಿ ಭಜನಾ ಮಂದಿರ, ದೇವಸ್ಥಾನ, ದೈವಸ್ಥಾನ ಭೇಟಿಯ ಮೂಲಕ ಸಾಮರಸ್ಯ ಸಮಾಜದ ನಿರ್ಮಾಣ. ದುಶ್ಚಟ ಮುಕ್ತ ಸಮಾಜಕ್ಕೆ ನಾಂದಿ, ಸಂಸ್ಕಾರ ರಥಯಾತ್ರೆ.

2011- ದಶಮಾನೋತ್ಸವ ಪ್ರಯುಕ್ತ ಹತ್ತು ಸೇವಾ ಗ್ರಾಮಗಳ ದತ್ತು ಸ್ವೀಕಾರ:
ಕರೋಪಾಡಿ, ಕನ್ಯಾನ, ಮಾಣಿಲ, ಪೆರುವಾಯಿ, ಕೊಳ್ನಾಡು, ಸಾಲೆತ್ತೂರು, ಇರಾ, ಮಂಚಿ, ಅಳಿಕೆ, ಹಾಗೂ ನೆಟ್ಲಮುಡ್ನೂರು, ಅನಂತಾಡಿ ಗ್ರಾಮಗಳನ್ನು ಆಯ್ಕೆಗೊಳಿಸಿ ವಿಕಾಸವಾಹಿನಿ ಸ್ವ-ಸಹಾಯ ಸಂಘಗಳಿಗೆ ಚಾಲನೆ ನೀಡಲಾಯಿತು. ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮದ ಜೊತೆಗೆ ಬಾಲವಿಕಾಸ ಕೇಂದ್ರ, ಹೊಲಿಗೆ ತರಬೇತಿ ಕೇಂದ್ರ, ಗುಡಿ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಿ ಸ್ವಾವಲಂಬನೆಯ ಜೊತೆಗೆ ನೈತಿಕ ಶಿಕ್ಷಣ, ಮಹಿಳಾ ವಿಕಾಸ ಕಾರ್ಯಕ್ರಮ, ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಕೃಷಿ ಮಾಹಿತಿ ಶಿಬಿರ, ಶೈಕ್ಷಣಿಕ ಪ್ರಗತಿಗಾಗಿ ಆರ್ಥಿಕ ನೆರವು, ಅನಾರೋಗ್ಯ ಪೀಡಿತರಿಗೆ ಸಾಂತ್ವಾನ, ಬಡಜನತೆಗೆ ಆಹಾರ, ಬಟ್ಟೆ, ಆಶ್ರಯ ನೀಡಿಕೆ, ಪ್ರಕೃತಿ ವಿಕೋಪದಿಂದ ಸಂತಸ್ತರಿಗೆ ನೆರವು, ಸಾರ್ವಜನಿಕ ಅವಶ್ಯಕತೆಗಳಿಗಾಗಿ ಸಹಕಾರ, ಶೌಚಾಲಯ, ಮನೆ ನಿಮಾಣಕ್ಕೆ ನೆರವು, ನವನಿಕೇತನ ಯೋಜನೆ ಮೂಲಕ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸುವುದು ಸನಿವಾಸದ ಯೋಜನೆಯಡಿ ಬಡ ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಮುಂತಾದ ಹತ್ತು-ಹಲವು ಸಮಾಜಮುಖಿ ಕಾರ್ಯದೊಂದಿಗೆ ಸಮಾಜದ ಶೋಷಿತ ವರ್ಗದಲ್ಲಿ ಸಂತೋಷವನ್ನು ಕಾಣುವ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇದೇ ಸಂದರ್ಭ ಮಂಗಳೂರು ನಗರದಲ್ಲಿ ಆಧ್ಯಾತ್ಮ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡು ನಗರವಾಸಿಗಳಲ್ಲಿ ಸಂಸ್ಕಾರದ ಜಾಗೃತಿಯನ್ನು ಮೂಡಿಸಲಾಗಿದೆ, ಈ ಸಂದರ್ಭ ಯೋಜನೆಯ ಸಮಗ್ರ ಮಾಹಿತಿಯನ್ನೊಳಗೊಂಡ “ಗ್ರಾಮಾಭ್ಯುದಯ” ಎಂಬ ಸ್ಮರಣ ಸಂಚಿಕೆಯನ್ನು ದಶಮಾನೋತ್ಸವ ಪ್ರಯುಕ್ತ ಹೊರತರಲಾಗಿದೆ.

2014 – ವಿಜಯ ರಜತ ಸಂಭ್ರಮ:
ಶ್ರೀ ಸಂಸ್ಥಾನದ ಬೆಳ್ಳಿ ಹಬ್ಬ ಸವಿನೆನಪಿಗಾಗಿ ತುಳುನಾಡಿನಾದ್ಯಂತ “ತುಳುನಾಡ್ದ ಜಾತ್ರೆ” ಬಲೇ…. ತೇರ್ ಒಯಿಪುಗ ಕಾರ್ಯಕ್ರಮವನ್ನು ಹಮ್ಮಿಕೊಂಡು ಪೂರ್ವ ಘಟ್ಟದ ತಪ್ಪಲಿನಿಂದ ಪಶ್ಚಿಮದ ಕಡಲತಡಿಯವರೆಗೆ, ದಕ್ಷಿಣದ ಚಂದ್ರಗಿರಿಯಿಂದ ಉತ್ತರದ ಬಾರ್ಕೂರ್‍ನ ವರೆಗೆ ಎಲ್ಲಾ ತುಳುವರನ್ನು ಒಗ್ಗೂಡಿಸಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ದಿನಾಂಕ 05-01-2014 ರಂದು ನಡೆದ ತುಳುನಾಡ್ದ ಜಾತ್ರೆ ಕಾರ್ಯಕ್ರಮ ತುಳು ಭಾಷೆ ಸಂಸ್ಕøತಿ ಉದ್ವೀಪನಕ್ಕಾಗಿ ಯಶಸ್ವಿಯಾಗಿ ಇತಿಹಾಸದ ಪುಟಗಳಲ್ಲಿ ಸ್ವರ್ಣಾಕ್ಷರಗಳಿಂದ ಬರೆದ ಕೀರ್ತಿ ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಗೆ ಸಲ್ಲಬೇಕು.

2016- ಗ್ರಾಮೋತ್ಸವ ಯೋಜನೆಯ ವಾರ್ಷಿಕೋತ್ಸವ:
ಪರಮಪೂಜ್ಯ ಶ್ರೀ ಗುರುಗಳ ಹಾಗೂ ಸಾಧ್ವಿ ಶ್ರೀ ಮಾತಾನಂದಮಯೀ ಯವರ ಮಾರ್ಗದರ್ಶನದಲ್ಲಿ ಪ್ರಸ್ತುತ ದ.ಕ, ಉಡುಪಿ, ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ವರೆಗೆ ಒಟ್ಟು 2394 ವಿಕಾಸವಾಹಿನಿ ಸ್ವ-ಸಹಾಯ ಸಂಘಗಳು ರಚನೆಗೊಂಡಿದ್ದು, 13870 ಮಹಿಳಾ ಸದಸ್ಯರು ಹಾಗೂ 4863 ಪುರುಷ ಸದಸ್ಯರು ಒಟ್ಟು 18733 ಸದಸ್ಯರನ್ನೊಳಗೊಂಡು 83 ಘಟಸಮಿತಿಗಳು ರಚನೆಗೊಂಡಿವೆ. ಮಂಡಲ ಸಮಿತಿಗಳು ನಿಸ್ವಾರ್ಥ ಮನೋಭಾವನೆಯಿಂದ ಕಾರ್ಯನಿರ್ವಹಿಸುತ್ತಿದೆ. 10 ಗ್ರಾಮಸಮಿತಿಗಳು ಗ್ರಾಮಾಭ್ಯುದಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ.. ಈ ವರೆಗೆ ಒಟ್ಟು ಉಳಿತಾಯ ರೂ. 5,83,59,296.50 ಆಗಿರುತ್ತದೆ. ಸದಸ್ಯರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಒಟ್ಟು ಈ ವರೆಗೆ ರೂ. 9,94,26,551.00 ಮುಂಗಡವನ್ನು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯಿಂದ ಪಡೆದು ಸರಿಯಾದ ರೀತಿಯಲ್ಲಿ ಮರುಪಾವತಿಯನ್ನು ನಡೆಸುತ್ತಾ ವ್ಯವಹರಿಸುತ್ತಿದ್ದಾರೆ.

ಈ ವರೆಗೆ ಒಟ್ಟು 15 ಉಚಿತ ಹೊಲಿಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು 671 ಜನರು ತರಬೇತಿಯನ್ನು ಪಡೆದುಕೊಂಡಿರುತ್ತಾರೆ. ಇದುವರೆಗೆ ಉಚಿತವಾಗಿ 66 ಹೊಲಿಗೆ ಯಂತ್ರವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಸೇವಾಗ್ರಾಮಗಳಲ್ಲಿ ಕ್ರಮಾನುಸಾರವಾಗಿ ನಿರಂತರ ಹೊಲಿಗೆ ತರಬೇತಿ ಶಿಬಿರಗಳು ನಡೆಯುತ್ತಲಿದೆ.

ಸ್ವಚ್ಚತೆಯ ಅರಿವು ಮೂಡಬೇಕು ಎಂಬ ಉದ್ದೇಶದಿಂದ ನಿರಂತರ 15 ವರ್ಷಗಳಿಂದ ಗ್ರಾಮೋತ್ಸವ ಸಂದರ್ಭ ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಗ್ರಾಮ ಸ್ವಚ್ಚತಾ ಕಾರ್ಯಕ್ರಮ ಹಾಗೂ ಪರಿಸರ ಸಂರಕ್ಷಣಾ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸುವುದರ ಜೊತೆಗೆ ದೇಶಾಭಿಮಾನ ಬೆಳೆಸುವ ಕಾರ್ಯ ನಿರಂತರವಾಗಿ ಕೈಗೊಳ್ಳಲಾಗಿದೆ. ಈ ವರ್ಷ ಜಿಲ್ಲೆಯಾದ್ಯಂತ 52 ಸ್ವಚ್ಚತಾ ಕಾರ್ಯಕ್ರಮ ಆಯೋಜಿಸಿದ್ದು 2239 ಜನ ಈ ಆಂದೋಲನದಲ್ಲಿ ಭಾಗವಹಿಸಿದ್ದಾರೆ.

ಕೆ.ಎಸ್.ಹೆಗ್ಡೆ, ಎ.ಜೆ, ಕೆ.ಎಮ್.ಸಿ, ವೆನ್‍ಲಾಕ್ ಮಂಗಳೂರು ಆಸ್ಪತ್ರೆಯ ಸಹಕಾರದೊಂದಿಗೆ ಒಟ್ಟು 77 ಚಿಕಿತ್ಸಾ ಶಬಿರಗಳನ್ನು ನಡೆಸಿ 17776 ಜನರಿಗೆ ಸಹಕಾರಿಯಾಗಿದೆ. ಹಾಗೂ 4 ರಕ್ತದಾನ ಶಿಬಿರವನ್ನು ಹಮ್ಮಿಕಂಡಿದ್ದು 270 ಮಂದಿ ರಕ್ತದಾನ ಮಾಡಿರುತ್ತಾರೆ. ಆರೋಗ್ಯದ ಬಗ್ಗೆ ಕಾಳಜಿ ಮೂಡುವಂತೆ ಆರೋಗ್ಯ ಮಾಹಿತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಂಡೋಸಲ್ಫಾನ್ ಪೀಡಿತರಿಗೆ ವಿಕಲಾಂಗರಿಗೆ ಸಾಂತ್ವನ ನೀಡಲಾಗಿದೆ. ವರದಿ ವರ್ಷದಲ್ಲಿ ಸುಮಾರು 22 ಲಕ್ಷ ರೂ ಸಹಾಯಹಸ್ತ ನೀಡುವುದರೊಂದಿಗೆ ಯೋಜನೆ ಕಳೆದ 5 ವರ್ಷಗಳಲ್ಲಿ ಸುಮಾರು ರೂ.2.50 ಕೋಟಿ ಮೊತ್ತವನ್ನು ಸೇವಾಕಾರ್ಯಗಳಿಗೆ ವಿನಿಯೋಗಿಸಲಾಗಿದೆ.ಯೋಜನೆಯ ವ್ಯಾಪ್ತಿಯ ಬಂಧುಗಳಿಗೆ ಆಟೋಟ ಸ್ಪರ್ಧೆ ಹಾಗೂ ಬಹುಮಾನ ವಿತರಣೆ, ಕೃಷಿ ಬದುಕು ನಿರ್ಮಿಸುವ ನಿಟ್ಟಿನಲ್ಲಿ ಕೆಸರುಗದ್ದೆ ಕ್ರೀಡಾಕೂಟಗಳ ಆಯೋಜನೆ, ಸೇವಾ ಗ್ರಾಮಗಳಲ್ಲಿ ಅಪೇಕ್ಷಿತ ಶಾಲೆಗಳಿಗೆ ಶಿಕ್ಷಕರನ್ನು ಒದಗಿಸಲಾಗಿದೆ. ಸೇವಾ ಗ್ರಾಮಗಳಲ್ಲಿ ವನಮಹೋತ್ಸವ, ಮಾಹಿತಿ ಶಿಬಿರಗಳು, ಆರೋಗ್ಯ ತಪಾಸಣಾ ಶಿಬಿರಗಳು, ಧಾರ್ಮಿಕ ಕಾರ್ಯಕ್ರಮಗಳು, ಸ್ವ ಉದ್ಯೋಗ ತರಬೇತಿ ಶಿಬಿರಗಳು ಪ್ರಾಣಾಯಾಮ, ಧ್ಯಾನ, ಭಜನೆ ತರಬೇತಿ ಕಾರ್ಯಕ್ರಮ, ಬಾಲವಿಕಾಸ ಸಮಾವೇಶ, ಪ್ರವಾಸಗಳ ಆಯೋಜನೆ ಮಾಡಲಾಗುತ್ತಿದೆ. ಆರ್ಥಿಕತೆಯನ್ನು ಗಮನಿಸಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಸೇವಾ ಗ್ರಾಮಗಳಲ್ಲಿ 1667 ಶೌಚಾಲಯಕ್ಕೆ ಸಹಾಯಹಸ್ತ ನೀಡಲಾಗಿದೆ.

ಗ್ರಾಮ ಪಂಚಾಯತ್ ಹಾಗೂ ಲಯನ್ಸ್ ಕ್ಲಬ್ ಸಂಸ್ಥೆಗಳ ಸಹಕಾರದೊಂದಿಗೆ ಹಲವು ಶೌಚಾಲಯ ಒದಗಿಸಿ ಕೊಡಲಾಗಿದೆ. ನವನಿಕೇತನ ಯೋಜನೆಯಡಿ ಈ ವರೆಗೆ ತೀರ ಬಡತನದಲ್ಲಿರುವ 15 ಕುಟುಂಬಗಳಿಗೆ ಮನೆ ನಿರ್ಮಿಸಿ ಹಸ್ತಾಂತರ ಮಾಡಲಾಗಿದೆ.

ಪೂಜ್ಯ ಶ್ರೀಗಳವರ ಸಮಾಜದಿಂದ ಸಮಾಜಕ್ಕೆ ಎಂಬ ಆಶಯದಂತೆ ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸಂಸ್ಕಾರದಿಂದ ಜೋಡಿಸಿ ಸೇವಾ ಮನೋಭಾವನೆಯೊಂದಿಗೆ ಸಂಘಟನೆಯಲ್ಲಿ ತೊಡಗಿಸುವ ಮೂಲಕ ಸಮೃದ್ಧಿಯನ್ನು ಕಾಣುತ್ತದೆ.