ಜ.30 ಮತ್ತು 31ರಂದು ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜನವರಿ 30 ಮತ್ತು 31ರಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ತುಳುನಾಡ ಜಾತ್ರೆ-ಶ್ರೀ ಒಡಿಯೂರು ರಥೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ, ಸಾಹಿತಿ, ಕವಿ ಡಾ. ವಸಂತಕುಮಾರ ಪೆರ್ಲ ಇವರ ಅಧ್ಯಕ್ಷತೆಯಲ್ಲಿ ಎರಡು ದಿನ ತುಳು ಸಾಹಿತ್ಯ ಸಮ್ಮೇಳನವು ಈ ಸುಸಂದರ್ಭ ನಡೆಯಲಿದೆ.
ಜ.30ರಂದು ಬೆಳಿಗ್ಗೆ ತುಳು ಸಾಹಿತ್ಯ ಸಮ್ಮೇಳನವನ್ನು ಪೂಜ್ಯ ಶ್ರೀಗಳವರು ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ತುಳುವೆರೆ ಚಾವಡಿ ಬೆಂಗಳೂರು ಇದರ ಗೌರವಾಧ್ಯಕ್ಷ ಪುರುಷೋತ್ತಮ ಚೇಂಡ್ಲ, ದ.ಕ. ಜಿಲ್ಲಾ ಕ್ಯಾಟರಿಂಗ್ ಎಸೋಸಿಯೇಶನ್ನ ಅಧ್ಯಕ್ಷ ರಾಜ್ಗೋಪಾಲ ರೈ ಭಾಗವಹಿಸಲಿರುವರು.
ಬೆಳಿಗ್ಗೆ ಗಂಟೆ 11.30ಕ್ಕೆ ಜರಗುವ ತುಳು ತುಲಿಪು ವಿಚಾರಗೋಷ್ಠಿಯಲ್ಲಿ ‘ನೆಲ’ ಎಂಬ ವಿಚಾರವಾಗಿ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಯೋಗೀಶ್ ಕೈರೋಡಿ, ‘ಜಲ’ದ ಬಗ್ಗೆ ಹಿರಿಯ ಪತ್ರಕರ್ತ ಯು.ಕೆ. ಕುಮಾರನಾಥ್, ‘ನಲಿಕೆ-ತೆಲಿಕೆ’ಯ ಬಗ್ಗೆ ದೈವ ನರ್ತಕ ಕಿಟ್ಟು ಕಲ್ಲುಗುಡ್ಡೆ ವಿಚಾರ ಮಂಡಿಸಲಿದ್ದಾರೆ.
ಮಧ್ಯಾಹ್ನ ಗಂಟೆ 1.30ರಿಂದ ತುಳು ಜಾನಪದ ನಲಿಕೆ-ತೆಲಿಕೆ ಪಂತೊ-ತುಳು ಜಾನಪದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ. ಸಂಜೆ ಗಂಟೆ 6.30ರಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ, ಪಾವಂಜೆ ಇವರಿಂದ ‘ಪಾವನ ಪವನಾತ್ಮಜ’ ಯಕ್ಷಗಾನ ಬಯಲಾಟ.
ಜ.31ರಂದು ಬೆಳಿಗ್ಗೆ ಗಂಟೆ 9.30ಕ್ಕೆ ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭ. ಬಳಿಕ ಗಂಟೆ 10.30ರಿಂದ ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ತುಳು ಸಾಹಿತ್ಯ ಸಮ್ಮೇಳನದ ಸಮಾರೋಪ, ಒಡಿಯೂರು ತುಳು ನಾಟಕೋತ್ಸವ-ತುಳು ನಾಟಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿರುವರು. ವಿಶೇಷ ಆಹ್ವಾನಿತರಾಗಿ ಬಿ.ಜೆ.ಪಿ. ರಾಜ್ಯಾಧ್ಯಕ್ಷ, ಮಂಗಳೂರು ಸಂಸದ ನಳಿನ್ಕುಮಾರ್ ಕಟೀಲು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಯು., ಮುಂಬೈ ಹೇರಂಭ ಇಂಡಸ್ಟ್ರೀಸ್ನ ಅಧ್ಯಕ್ಷ ಸದಾಶಿವ ಶೆಟ್ಟಿ ಕೂಳೂರುಕನ್ಯಾನ, ಮುಂಬೈನ ಸಂಜೀವನಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುರೇಶ್ ರಾವ್, ಮುಂಬೈ ಉದ್ಯಮಿಗಳಾದ ವಾಮಯ್ಯ ಬಿ. ಶೆಟ್ಟಿ, ದಯಾನಂದ ಹೆಗ್ಡೆ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ. ಸುರೇಶ್ ರೈ ಉಪಸ್ಥಿತರಿರುವರು.
ಹಿರಿಯ ಮೃದಂಗ ವಾದಕ ವಿದ್ವಾನ್ ಬಾಬು ರೈ, ತುಳು ಸಾಹಿತಿ ಡಾ. ಸಾಯಿಗೀತಾ ತೋಕೂರುಗುತ್ತು, ದ.ಕ. ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ, ದತ್ತ ತುಳು ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸುಧಾಕರ ಶೆಟ್ಟಿ ಹಿರ್ಗಾನ, ಸಾವಯವ ಕೃಷಿಕ ರಾಮಣ್ಣ ಗೌಡ ಕಣಿಯೂರು ಇವರನ್ನು ‘ತುಳುಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಅಪರಾಹ್ಣ ಗಂಟೆ 3.00ರಿಂದ ವೈಷ್ಣವಿ ನಾಟ್ಯಾಲಯ (ರಿ.), ಪುತ್ತೂರು ಇವರಿಂದ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಇವರ ನಿರ್ದೇಶನದಲ್ಲಿ ‘ನೃತ್ಯಾರ್ಪಣಮ್’ ಹಾಗೂ ಸಂಜೆ ಗಂಟೆ 5.30ರಿಂದ ಜರ್ನಿ ಥೇಟರ್ ಗ್ರೂಪ್ (ರಿ.), ಮಂಗಳೂರು ಇವರಿಂದ ಪ್ರೊ. ಅಮೃತ ಸೋಮೇಶ್ವರ ರಚಿಸಿದ, ವಿದ್ದು ಉಚ್ಚಿಲ್ ನಿರ್ದೇಶನದ ಗೋಂದೊಳು ತುಳು ಜಾನಪದ ನಾಟಕ. ರಾತ್ರಿ ಗಂಟೆ 7.30ರಿಂದ ಶ್ರೀ ದತ್ತಾಂಜನೇಯ ದೇವರ ರಥೋತ್ಸವ.