“ಅಂತರಂಗದ ವ್ಯವಹಾರ-ಆತ್ಮೋದ್ಧಾರಕ್ಕೆ ಇರುವ ಮಾರ್ಗವೇ ಯೋಗ”


ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವತಿಯಿಂದ ಜರಗಿದ ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’ಯಲ್ಲಿ ಒಡಿಯೂರು ಶ್ರೀಗಳವರಿಂದ ಯೋಗ ಸಂದೇಶ
“ಯೋಗ ಜೀವ-ದೇವನ ಸಂಬಂಧದ ಬೆಸುಗೆ. ಅಲ್ಲಿ ಭಾವನೆ ಶುದ್ಧಿಯಾಗಿರಬೇಕು. ಅಧ್ಯಾತ್ಮದ ಬದುಕು ಭಾರತದಲ್ಲಿ ಮಾತ್ರ ಸಾಧ್ಯ. ಇಂದ್ರಿಯ ಗೋಚರಗಳಿಂದ ಶಾಂತಿ ಸಿಗದು. ತ್ಯಾಗದ ಬದುಕಿನಲ್ಲಿ ಶಾಂತಿ ಸಿಗುವುದು. ಚಿತ್ತದ ಚಿಂತೆಗೆ ಧ್ಯಾನ – ಯೋಗ ಅಗತ್ಯ. ಯೋಗದಿಂದ ಜಾಡ್ಯ ದೂರವಾಗುತ್ತದೆ. ಅಂತರಂಗದಲ್ಲಿ ಜಾಗೃತಿಯಾಗುತ್ತದೆ. ನಿತ್ಯ ಯೋಗದಿಂದ ಆರೋಗ್ಯ ಆಯುಷ್ಯ ವೃದ್ಧಿಯಾಗುತ್ತದೆ. ಯೋಗದಿಂದ ನಾವೆಲ್ಲರೂ ಯೋಗಿಗಳಾಗಬೇಕು. ಯೋಧರಾಗಬೇಕು ಮತ್ತು ಆದರ್ಶ ಕೃಷಿಕರಾಗಬೇಕು. ಯೋಗ ವ್ಯಾಪಾರದ ವಸ್ತು ಅಲ್ಲ. ಗಳಿಕೆಗೆ ಯೋಗ ಅಲ್ಲ. ಅಂತರAಗದ ವ್ಯವಹಾರಕ್ಕೆ ಆತ್ಮೋದ್ಧಾರಕ್ಕೆ ಇರುವ ಮಾರ್ಗ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವತಿಯಿಂದ ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಜರಗಿದ ‘ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಯೋಗಸಂದೇಶ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ದಿವ್ಯ ಸಾನ್ನಿಧ್ಯವಹಿಸಿದ್ದರು. ಶಾಲಾ ಸಂಚಾಲಕ ಗಣಪತಿ ಭಟ್ ಸೇರಾಜೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥನಾಗೀತೆ ಹಾಡಿದರು. ಮುಖ್ಯ ಶಿಕ್ಷಕಿ ರೇಣುಕಾ ಎಸ್.ರೈ ಸ್ವಾಗತಿಸಿ, ಶಿಕ್ಷಕ ಬಾಯಾರು ಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ದೈಹಿಕ ಶಿಕ್ಷಕಿ ಬಿಂದುಶ್ರೀ ಮೇಲಂಟ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಶಾಲಾ ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳೆಲ್ಲರೂ ಪಾಲ್ಗೊಂಡು ಧ್ಯಾನ-ಪ್ರಾಣಾಯಾಮ-ಯೋಗ ಮಾಡಿದರು.