“ಪರಿಶ್ರಮ ಆದರ್ಶ ಬದುಕಿಗೆ ಅತೀ ಮುಖ್ಯ”

ಶ್ರೀ ಲಲಿತಾ ಪಂಚಮಿ ಮಹೋತ್ಸವ – ‘ಶ್ರೀ ಒಡಿಯೂರು ಕಲಾಸಿರಿ’ ಪ್ರಶಸ್ತಿ ಪ್ರದಾನ ಮಾಡಿ
ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ
ಸೆ.೨೭: “ಬಂಧನ ಬಿಡುಗಡೆ ಮಾಡುವ ವಿದ್ಯೆ ಆಧ್ಯಾತ್ಮ ವಿದ್ಯೆ. ಬದುಕಿನಲ್ಲಿ ಸಂಸ್ಕಾರ ಅಗತ್ಯ. ಪರಿಶ್ರಮ ಆದರ್ಶ ಬದುಕಿಗೆ ಅತೀ ಮುಖ್ಯ. ಅಂತರ0ಗದ ಪ್ರವೇಶದಿಂದ ಶಾಂತಿ, ನೆಮ್ಮದಿ ಸಾಧ್ಯ. ಜಗತ್ತಿನ ಜಾಗೃತಿಗೆ ಕ್ರೀಯಾಶೀಲತೆ ಮುಖ್ಯ. ಸಮಾಜದಲ್ಲಿ ಪರಿವರ್ತನೆ ಅಗತ್ಯ. ಬದುಕು ನಿಂತ ನೀರಾಗಬಾರದು. ಕಲೆ, ಸಾಹಿತ್ಯ, ಸಂಗೀತ, ದೇಶದ ಮೌಲ್ಯ. ಭಾರತ ದೇಶವು ಆಧ್ಯಾತ್ಮಿಕತೆಯಿಂದ ಸಂಪದ್ಭರಿತವಾಗಿದೆ. ಭಾಷೆಗೂ, ಸಂಸ್ಕಾರಕ್ಕೂ ಹತ್ತಿರವಾದ ಸಂಬ0ಧವಿದೆ. ಧರ್ಮ-ಸಂಸ್ಕೃತಿ ಬಹಳ ಶ್ರೇಷ್ಠವಾದುದು. ಅವುಗಳು ಜೊತೆಜೊತೆಯಾಗಿ ಸಾಗಿದಾಗ ಬದುಕು ಹಸನಾಗುತ್ತದೆ. ಸಂಸ್ಕಾರ ಪೂರ್ಣ ಬದುಕು ನಮ್ಮದಾಗಬೇಕು” ಎಂದು ಪೂಜ್ಯ ಸ್ವಾಮೀಜಿಯವರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದರಿದಲ್ಲಿ ಜರಗಿದ ಶ್ರೀ ಲಲಿತಾ ಪಂಚಮಿ ಮಹೋತ್ಸವದ ಸಮಾರಂಭದಲ್ಲಿ ‘ಶ್ರೀ ಒಡಿಯೂರು ಕಲಾಸಿರಿ’ ಪ್ರಶಸ್ತಿ ಪ್ರದಾನ ಮಾಡಿ ದಿವ್ಯ ಸಂದೇಶ ನೀಡಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಶ್ರೀ ದಾಸಪ್ಪ ಶೆಟ್ಟಿ ಎಸ್. ಪಂತಡ್ಕ, ಮಂಗಳೂರು ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಶ್ರೀ ಪಿ. ನಿತ್ಯಾನಂದ ರಾವ್, ಖ್ಯಾತ ಯಕ್ಷಗಾನ ಭಾಗವತ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಹಿರಿಯ ಪರ್ತಕರ್ತ ಶ್ರೀ ಅಚ್ಯುತ ಚೇವಾರು, ಚಿತ್ರನಟ ಹಾಗೂ ತುಳು ರಂಗಭೂಮಿ ಕಲಾವಿದ ಶ್ರೀ ಸುಂದರ ರೈ ಮಂದಾರ ಇವರಿಗೆ ‘ಶ್ರೀ ಒಡಿಯೂರು ಕಲಾಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರತಿಭಾ ಪುರಸ್ಕಾರ: ಯುವ ಪ್ರತಿಭೆಗಳಾದ ಯಕ್ಷಗಾನ ಚೆಂಡೆ ವಾದಕ ಮಾ. ಅದ್ವೈತ್ ಕನ್ಯಾನ, ಭರತನಾಟ್ಯ ಕಲಾವಿದೆ ಕು. ಪ್ರತೀಕ್ಷಾ ಶೆಟ್ಟಿ ವಾಮದಪದವು ಇವರಿಗೆ ಪ್ರತಿಭಾ ಪುರಸ್ಕಾರ ಮಾಡಿ ಪೂಜ್ಯ ಶ್ರೀಗಳವರು ಆಶೀರ್ವದಿಸಿದರು.
ಮಂಗಳೂರು ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಶ್ರೀ ಪಿ. ನಿತ್ಯಾನಂದ ರಾವ್ ಇವರು ಸನ್ಮಾನ ಸ್ವೀಕರಿಸಿ ಮಾತನಾಡಿ “ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪೂಜ್ಯ ಶ್ರೀಗಳವರ ಪಾತ್ರ ಮಹತ್ತರವಾದುದು. ಮಠಗಳೆ ನಮಗೆ ಆಸರೆ. ಶ್ರೀಗಳ ಆಶಯಗಳನ್ನು ಈಡೇರಿಸುವ ಕೆಲಸ ಮಾಡೋಣ. ಮಕ್ಕಳನ್ನು ಪ್ರೋತ್ಸಾಹಿಸುವುದು ಸಮಾಜವನ್ನು ಪ್ರೋತ್ಸಾಹಿಸಿದಂತೆ. ಇಂತಹ ಸನ್ಮಾನ, ಪ್ರೋತ್ಸಹ ಮಕ್ಕಳಿಗೆ ದಾರಿದೀವಿಗೆಯಾಗಿದೆ” ಎಂದರು.




ಚಿತ್ರನಟ ಹಾಗೂ ತುಳು ರಂಗಭೂಮಿ ಕಲಾವಿದ ಶ್ರೀ ಸುಂದರ ರೈ ಮಂದಾರ ಸನ್ಮಾನ ಸ್ವೀಕರಿಸಿ ಮಾತನಾಡಿ “ಇದೊಂದು ಪರಮಶ್ರೇಷ್ಠ ಸನ್ಮಾನ. ಜೀವನದಲ್ಲಿ ಮರೆಯಲಾಗದ ದಿನ. ಶ್ರೀ ಕ್ಷೇತ್ರದಿಂದ ನಿತ್ಯ ನಿರಂತರವಾಗಿ ಕಲಾವಿದರಿಗೆ ಸನ್ಮಾನ ನಡೆಯುತ್ತಿದೆ. ಶ್ರೀ ಸಂಸ್ಥಾನ ನಿರಂತರ ಕಲೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಕಲೆ-ಕಲಾವಿದರಿಗೆ ರಾಜಾಶ್ರಯ ನೀಡಿದ ಕ್ಷೇತ್ರ ಒಡಿಯೂರು” ಎಂದರು.
ಸಾಧ್ವೀ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ಕರುಣಿಸಿದ್ದರು. ವೇದಿಕೆಯಲ್ಲಿ ಮುಂಬೈ ಉದ್ಯಮಿ ಶ್ರೀ ವಾಮಯ್ಯ ಬಿ.ಶೆಟ್ಟಿ ಮತ್ತು ಶ್ರೀಮತಿ ರೇವತಿ ವಾಮಯ್ಯ ಶೆಟ್ಟಿ, ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಲ| ಎ. ಸುರೇಶ್ ರೈ ಉಪಸ್ಥಿತರಿದ್ದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕಿ ಶ್ರೀಮತಿ ಅನಿತಾ, ಶಿಕ್ಷಕರಾದ ಶ್ರೀ ಶೇಖರ ಶೆಟ್ಟಿ ಬಾಯಾರು ಒಡಿಯೂರು ಶ್ರೀ ಗುರುದೇವ ಐ.ಟಿ.ಐ.ನ ಪ್ರಾಂಶುಪಾಲ ಶ್ರೀ ಪ್ರವೀಣ್ಕುಮಾರ್ ಎನ್., ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಮಾತೇಶ್ ಭಂಡಾರಿ, ಯೋಜನೆಯ ಕಡಬ ತಾಲೂಕಿನ ಮೇಲ್ವಿಚಾರಕಿ ಶ್ರೀಮತಿ ಕಾವ್ಯಮಧು ಇವರು ಸನ್ಮಾನಿತರ ಪರಿಚಯ ವಾಚಿಸಿದರು.
ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀಗಳವರು ಶ್ರೀ ಸಂಸ್ಥಾನದ ಮಾಹಿತಿಗಳನ್ನೊಳಗೊಂಡ ಪರಿಷ್ಕೃತ ‘ಪರಿಚಯ ದರ್ಪಣ-೨೦೨೫’ನ್ನು ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಹಲವು ವಿಕಾಸವಾಹಿನಿ ಸ್ವ-ಸಹಾಯ ಸಂಘಗಳಿಗೆ ಲಾಭಾಂಶವನ್ನು ವಿತರಣೆ ಮಾಡಲಾಯಿತು.




ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯ ಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ ಪ್ರಾರ್ಥನಾಗೀತೆಯೊಂದಿಗೆ ಆರಂಭಗೊ0ಡ ಕಾರ್ಯಕ್ರಮದಲ್ಲಿ ಸಂಚಾಲಕರಾದ ಶ್ರೀ ಗಣಪತಿ ಭಟ್ ಸೇರಾಜೆ ಸ್ವಾಗತಿಸಿದರು. ಶ್ರೀ ಸಂತೋಷ್ ಭಂಡಾರಿ ವಂದಿಸಿ, ಒಡಿಯೂರುದ ತುಳುಕೂಟದ ಅಧ್ಯಕ್ಷ ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ವೈದಿಕ ಕಾರ್ಯಕ್ರಮ:
ಆರಾಧ್ಯದೇವರ ನಿತ್ಯಪೂಜೆಯ ಬಳಿಕ ದೀಪಾರಾಧನೆ, ಸ್ವಯಂ ಭೂ ನಾಗರಾಜ ಸನ್ನಿಧಿಯಲ್ಲಿ ನಾಗತಂಬಿಲ ಜರಗಿ ಬಳಿಕ ಶ್ರೀ ಚಂಡಿಕಾ ಯಾಗ ಆರಂಭಗೊ0ಡಿತು. ಮಧ್ಯಾಹ್ನ ಶ್ರೀ ಚಂಡಿಕಾ ಯಾಗದ ಪೂರ್ಣಾಹುತಿ, ಶ್ರೀ ವಜ್ರಮಾತೆಗೆ ಕಲ್ಪೋಕ್ತ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಮಹಾಸಂತರ್ಪಣೆ ನಡೆಯಿತು.
ಅಪರಾಹ್ಣ ನೃತ್ಯಾಂಜಲಿ ನಾಟ್ಯಶಾಲೆ, ವಾಮದಪದವು ಇವರಿಂದ ವಿದುಷಿ ವಿನುತಾ ಪ್ರವೀಣ್ ಗಟ್ಟಿ ಇವರ ನಿರ್ದೇಶನದಲ್ಲಿ ‘ನೃತ್ಯಾಮೃತಮ್’ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಸಾಯಂಕಾಲ ೬ರಿಂದ ಸಾಮೂಹಿಕ ಸ್ವಯಂವರ ಪಾರ್ವತೀಪೂಜೆ, ಅಷ್ಟಾವಧಾನ ಸೇವೆ, ರಂಗಪೂಜೆ, ಭದ್ರಕಾಳಿಗೆ ವಿಶೇಷಪೂಜೆಯೊಂದಿಗೆ ಉತ್ಸವವು ಸಂಪನ್ನಗೊ0ಡಿತು.