“ವಿಘ್ನನಿವಾರಕ ಗಣಪತಿ ಜಲತತ್ತ್ವದ ಅಧಿಪತಿ. ಭಕ್ತಿ-ಶ್ರದ್ಧೆಯಿಂದ ಸಲ್ಲಿಸಿದ ಪೂಜೆ; ಅರ್ಪಿಸಿದ ಸುವಸ್ತುಗಳನ್ನು ಗಣಪತಿಯು ಸ್ವೀಕರಿಸುತ್ತಾನೆ. ಮೃಗತ್ವದಿಂದ ಮನುಷ್ಯತ್ವ; ಮನುಷ್ಯತ್ವದಿಂದ ದೇವತ್ವವನ್ನು ಹೊಂದಬೇಕೆನ್ನುವುದೇ ಗಣಪತಿಯ ಸಂದೇಶವಾಗಿದೆ. ಪಂಚಭೂತಗಳಲ್ಲಿ ದೇವರನ್ನು ಕಂಡು ಪೂಜಿಸುವುದು ನಮ್ಮ ಸಂಸ್ಕøತಿ. ಈ ನಿಟ್ಟಿನಲ್ಲಿ ಮಣ್ಣಿನಿಂದ ನಿರ್ಮಿತ ಗಣಪತಿಯನ್ನು ಪಂಚಭೂತಗಳಲ್ಲಿ ಒಂದಾದ ಜಲದಲ್ಲಿ ವಿಸರ್ಜಿಸುವ ಪದ್ಧತಿ ರೂಢಿಯಲ್ಲಿದೆ.
ಅಂತಃಚಕ್ಷಸ್ಸುವಿನಿಂದ ಎಲ್ಲವನ್ನು ಅರಿತಾಗ ಬದುಕು ಹಸನಾಗುತ್ತದೆ ” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಜರಗಿದ ಶ್ರೀ ಗಣಪತಿ ಅಥರ್ವಶೀರ್ಷ ಹವನದ ಸಂದರ್ಭ ಆಶೀರ್ವಚನ ನೀಡಿದರು.
ಈ ಸುಸಂದರ್ಭ ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ವೇ|ಮೂ ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ಶ್ರೀ ಗಣಪತಿ ಅಥರ್ವಶೀರ್ಷ ಹವನ ಸಂಪನ್ನಗೊಂಡಿತು.