“ಸಂತಸಕೊಡುವ ದೇವರೆಂದರೆ ವಿನಾಯಕ. ಸಮಾಜದಲ್ಲಿ ಅದೆಷ್ಟೋ ನಾಯಕರನ್ನು ಕಾಣಬಹುದು. ಆದರೆ ಎಲ್ಲಾ ನಾಯಕರಿಗೂ ನಾಯಕ ‘ವಿನಾಯಕ’. ವಿನಾಯಕನನ್ನು ಮರೆತರೆ ಎಲ್ಲವೂ ಅಧಃಪತನವೇ. ಚತುರ್ವೇದಗಳಲ್ಲಿಯೂ ಗಣಪತಿ ವಂದ್ಯನಾಗಿದ್ದಾನೆ. ‘ಗ್’ ಎಂದರೆ ಋಗ್ವೇದ, ‘ಜ’ ಎಂದರೆ ಯಜುರ್ವೇದ, ‘ನ’ ಎಂದರೆ ಸಾಮಗಾನ, ‘ನ’ ಎಂದರೆ ಅಥರ್ವಣ ವೇದ – ಹೀಗೆ ಅಕ್ಷರಗಳು ‘ಗಜಾನನ’ ಹೆಸರಿನಲ್ಲಿ ಅಡಕವಾಗಿದೆ. ವಿಘ್ನವಿನಾಶಕನಾದ ಗಣನಾಯಕನು ಜ್ಞಾನದ ಗಣಿ. ನಾವು ಜ್ಞಾನ ಗಳಿಸಬೇಕೆಂಬುದೇ ಆತನ ಸಂದೇಶ. ಏಕಾಗ್ರತೆ, ಹೃದಯವೈಶಾಲ್ಯತೆ ವಿನಾಯಕನ ವ್ಯಕ್ತಿತ್ವದ ಮೂಲತತ್ತ್ವ. ದುರ್ಗುಣ-ದುಷ್ಕರ್ಮಗಳನ್ನು ತ್ಯಜಿಸಿ ಸದ್ಗುಣಿಗಳಾಗಿ ಸತ್ಕರ್ಮ ನಿರತರಾಗಿ ಸಾರ್ಥಕ ಬದುಕನ್ನು ಬಾಳುವುದು ನಮ್ಮೆಲ್ಲರ ಲಕ್ಷ್ಯವಾಗಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಸಂಪನ್ನಗೊಂಡ ಶ್ರೀ ಗಣಪತಿ ಅಥರ್ವಶೀರ್ಷ ಹವನದ ಪೂರ್ಣಾಹುತಿಯ ಸಂದರ್ಭ ಸಂದೇಶ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಉಪಸ್ಥಿತರಿದ್ದು, ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ಶ್ರೀ ಗಣಪತಿ ಅಥರ್ವಶೀರ್ಷ ಹವನ ವಿಧಿವತ್ತಾಗಿ ನಡೆಯಿತು.