“ಸಮಾಜದಲ್ಲಿ ಎರಡು ತರದ ಜನರಿರುತ್ತಾರೆ. ಕೆಲವರು ರೇಷ್ಮೆಹುಳು ತರ, ಇನ್ನು ಕೆಲವರು ಜೇಡನ ತರ. ರೇಷ್ಮೆ ಹುಳು ತಾನೇ ಕಟ್ಟಿದ ಗೂಡಿನೊಳಗೆ ನಾಶವಾಗುತ್ತದೆ. ಜೇಡ ತಾನೇ ಕಟ್ಟಿದ ಬಲೆಯಲ್ಲಿ ಜೀವನ ನಡೆಸುತ್ತದೆ. ಯಾವತ್ತೂ ಜೇಡ ತಾನೇ ಕಟ್ಟಿದ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ಹೀಗೆಯೇ ನಮ್ಮ ಬದುಕೂ ಕೌಶಲ್ಯದ ಬದುಕಾಗಬೇಕು. ಎಲ್ಲದರಲ್ಲೂ ಅಚ್ಚುಕಟ್ಟುತನ ಜೊತೆಗೆ ಅಧ್ಯಾತ್ಮದೊಂದಿಗೆ, ಕೌಶಲ್ಯ ಬದುಕು ಮಾಡಲು ಯಾರಿಗೆ ಆಗುತ್ತದೆಯೋ ಅದು ಶ್ರೇಷ್ಠ ಬದುಕಾಗುತ್ತದೆ. ಕಲ್ಪನೆಯೇ ನಮ್ಮ ಬದುಕಲ್ಲ. ಬದುಕಿನ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಬೇಕು. ಸಮಸ್ಯೆಯನ್ನು ಬುದ್ಧಿವಂತಿಕೆಯಿಂದ ಪರಿಹರಿಸಿಕೊಂಡು ಜೀವನ ನಡೆಸುವುದೇ ಕೌಶಲ್ಯ. ಸಗುಣ, ನಿರ್ಗುಣಗಳಲ್ಲಿ ಭಗವಂತನ ಆವಿರ್ಭಾವವಿರುತ್ತದೆ. ನೋಡುವ ದೃಷ್ಟಿ ನಮಗೆ ಬೇಕು. ಒಳಗಣ್ಣು ತೆರೆಯುವಂತಹ ಕಾರ್ಯ ಮಾಡಿದಾಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ದಾವಣಗೆರೆ ಘಟಕದ 11ನೇ ವಾರ್ಷಿಕೋತ್ಸವದಲ್ಲಿ ಆಶೀರ್ವಚನಗೈದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶಯಗೀತೆ ಹಾಡಿದರು. ಶ್ರೀ ಯಶವಂತ್ ವಿಟ್ಲ ಪ್ರಸ್ತಾವನೆಗೈದರು.
ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ದಾವಣಗೆರೆ ಘಟಕದ ಅಧ್ಯಕ್ಷ ಶ್ರೀ ಎಚ್. ಸಿದ್ಧರಾಮಪ್ಪ ಅವರು ಸ್ವಾಗತಿಸಿದರು. ನ್ಯಾಯವಾದಿ ಶ್ರೀ ಟಿ. ಹನುಮಂತಪ್ಪ ಕಂಚಕೆರೆ, ನ್ಯಾಯವಾದಿ ಶ್ರೀ ಬಾಬುಪಂಡಿತ ಗೋಸಾಯಿ, ಶ್ರೀ ಪಂಡರೀನಾಥ ಬಗರೆ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ದಾವಣಗೆರೆ ಘಟಕದ ಅಧ್ಯಕ್ಷೆ ಶ್ರೀಮತಿ ಸುಮಾ ರಾಜಶೇಖರ್, ಶ್ರೀಮತಿ ಮಂಜುಳಾ ಹರೇಶ್, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ದಾವಣಗೆರೆ ಘಟಕಕ್ಕೆ ಸರಕಾರದಿಂದ ಮಂಜೂರಾದ ನಿವೇಶನದಲ್ಲಿ ಅಳವಡಿಸಿದ ನಾಮಫಲಕವನ್ನು ಪೂಜ್ಯ ಶ್ರೀಗಳವರು ಅನಾವರಣಗೊಳಿಸಿದರು.