ಬದುಕಿನ ಲಕ್ಷ್ಯವನ್ನು ಭಗವಂತನೆಡೆಗೆ ಸಾಗಿಸಲು ದತ್ತ ಮಾಲಾಧಾರಣೆ ಪೂರಕ
ಒಡಿಯೂರಿನಲ್ಲಿ ಶ್ರೀ ದತ್ತ ಮಾಲಾಧಾರಣೆಗೈದು ಒಡಿಯೂರು ಶ್ರೀ ಆಶೀರ್ವಚನ
‘ಗುರು’ ಎಂದರೆ ಜ್ಯೇಷ್ಠ, ದೊಡ್ಡದು ಎಂಬ ಅರ್ಥಗಳಿವೆ. ಗುರು ಯಾವತ್ತೂ ಲಘುವಾಗುವುದಿಲ್ಲ. ‘ಗು’ ಎಂದರೆ ಅಂಧಾಕಾರ, ‘ರು’ ಎಂದರೆ ಬೆಳಕು. ಅಂಧಾಕಾರವನ್ನು ನಿವಾರಿಸಿ ಸುಜ್ಞಾನದ ಬೆಳಕನ್ನು ನೀಡುವವನೇ ಗುರು. ವಿಷ್ಣುವಿನ 6ನೇ ಅವತಾರವೇ ಗುರುದತ್ತಾತ್ರೇಯರು. ಅತ್ರಿಯ ಮಗನಾದುದರಿಂದ ಆತ್ರೇಯನಾದ. ದೇವನೇ ಗುರುವಾಗಿ ಧರೆಯಲ್ಲಿ ಅವತರಿಸಿದ. ಗುರುತತ್ತ್ವವೇ ಶ್ರೇಷ್ಠ ತತ್ತ್ವ. ಅದೇ ಆತ್ಮತತ್ತ್ವ, ಅಧ್ಯಾತ್ಮ ತತ್ತ್ವ. ಪ್ರೀತಿ ಭಾವವೇ ಅಧ್ಯಾತ್ಮ ತತ್ತ್ವ. ಆತ್ಮತತ್ತ್ವಕ್ಕೆ ಲಿಂಗಬೇಧವಿಲ್ಲ. ಅಧ್ಯಾತ್ಮದ ಬಗ್ಗೆ ಒಲವಿರುವವರಿಗೆ ದತ್ತಮಾಲಾಧಾರಣೆ ಉತ್ತಮ. ಬದುಕಿನ ಲಕ್ಷ್ಯವನ್ನು ಭಗವಂತನೆಡೆಗೆ ಸಾಗಿಸಲು, ಆತ್ಮಶಕ್ತಿ ಜಾಗೃತಗೊಳಿಸಲು ಪೂರಕ. ಆತ್ಮಜ್ಯೋತಿ ಬೆಳಗಿದರೆ ಅದು ನಮ್ಮನ್ನು ಬೆಳಗಿಸುತ್ತದೆ” ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ದತ್ತ ಜಯಂತಿ ಮಹೋತ್ಸವದ ಪ್ರಯುಕ್ತ ಶ್ರೀ ದತ್ತಮಾಲಾಧಾರಣೆಗೈದು ಪೂಜ್ಯ ಶ್ರೀಗಳವರು ಆಶೀರ್ವಚನಗೈದರು. ಒಡಿಯೂರು ಶ್ರೀ ಸಂಸ್ಥಾನದ ಉತ್ಸವಗಳನ್ನೊಳಗೊಂಡ 2019ರ ಕ್ಯಾಲೆಂಡರನ್ನು ಬಿಡುಗಡೆಗೊಳಿಸಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಉಪಸ್ಥಿತರಿದ್ದರು.
ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ಶ್ರೀ ದತ್ತ ಮಹಾಯಾಗ ಸಪ್ತಾಹ ಆರಂಭಗೊಂಡಿತು. ವಿದ್ವಾನ್ ವಿ.ಬಿ. ಹಿರಣ್ಯ ಅವರಿಂದ ಶ್ರೀ ಗುರುಚರಿತಾಮೃತ ಪ್ರವಚನ ನಡೆಯಿತು. ಅಪರಾಹ್ಣ ಘಂಟೆ 2.00ರಿಂದ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ‘ಅಬ್ಬಗ ದಾರಗೆ’ ಎಂಬ ತುಳು ಯಕ್ಷಗಾನ ಪ್ರದರ್ಶನಗೊಂಡಿತು. ಸಂಜೆ ಶ್ರೀ ದತ್ತಾಂಜನೇಯ ದೇವರ ಪಲ್ಲಕಿ ಉತ್ಸವ, ರಂಗಪೂಜೆ, ಬೆಳ್ಳಿರಥೋತ್ಸವ ಸೇವೆಯೂ ಸಂಪನ್ನಗೊಂಡಿತು.