‘ಭಾರತೀಯ ಸಂಸ್ಕೃತಿಯ ರಾಯಭಾರಿ ತಾಯಿಯಾಗಬೇಕು, ತಾಯಿಯಲ್ಲಿ ದೇವರನ್ನು ಕಾಣಬೇಕು. ಒಂದು ಆದರ್ಶ ಶಾಲೆಯ ಹಿಂದೆ ಪೋಷಕರ ಪಾತ್ರವಿದೆ. ಹಿತಮಿತವಾಗಿದ್ದು ನಮ್ಮನ್ನು ನಾವು ಸರಿಯಾಗಿರಿಸಿಕೊಳ್ಳಬೇಕು. ಮಗುವನ್ನು ಭಾರತೀಯ ಸಂಸ್ಕೃತಿಯ ವಾರಸುದಾರರನ್ನಾಗಿ ಮಾಡಿ ಧರ್ಮ ಸಂಸ್ಕೃತಿಯನ್ನು ಉಳಿಸುವ ದೃಷ್ಟಿಯಿಂದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಹಾಗೂ ಮಾತೃಪೂಜನಾ ಕಾರ್ಯಕ್ರಮ ಸಂಪನ್ನಗೊಂಡಿದೆ’ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಹಮ್ಮಿಕೊಂಡ ಮಾತೃಪೂಜನಾ ಕಾರ್ಯಕ್ರಮ ಮತ್ತು ಸಾಮೂಹಿಕ ಮಕ್ಕಳ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಆಶೀರ್ವಚನವಿತ್ತರು.
ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದ ಸಾಧ್ವಿ ಶ್ರೀ ಮಾತಾನಂದಮಯಿಯವರು ‘ತ್ಯಾಗ ಎನ್ನುವುದಕ್ಕೆ ಮತ್ತೊಂದು ಹೆಸರೇ ತಾಯಿ. ಮಗುವಿನ ಭವಿಷ್ಯತ್ತಿನ ಪುನರುಜ್ಜೀವನಕ್ಕೆ ಪೂರ್ಣ ತ್ಯಾಗ ನೀಡುವವಳು ತಾಯಿ. ತಂದೆ-ತಾಯಿಯವರ ಆರಾಧನೆ ಮಾಡಿದರೆ ಅದುವೇ ಭಗವಂತನ ಆರಾಧನೆ. ತಂದೆ-ತಾಯಿ ಪ್ರತ್ಯಕ್ಷ ದೇವರು’ ಎಂದು ಆಶೀರ್ವಚನವಿತ್ತರು.
ಮಾತೃಪೂಜನಾ ಕಾರ್ಯಕ್ರಮವನ್ನು ಶಿವಶಂಕರ ಭಟ್ರವರು ನಡೆಸಿಕೊಟ್ಟರು. ವೇದಿಕೆಯಲ್ಲಿ ಅತಿಥಿಗಳಾಗಿ ಪ್ರಕಾಶ್ ಶೆಟ್ಟಿ ಮುಂಬಯಿ, ಕಾರ್ಯನಿರ್ವಹಣಾಧಿಕಾರಿ ಪದ್ಮನಾಭ ಒಡಿಯೂರು, ಶಾಲಾ ಸಂಚಾಲಕರು ಸೇರಾಜೆ ಗಣಪತಿ ಭಟ್, ಶಾಲಾ ಮುಖ್ಯೋಪಾಧ್ಯಾಯ ಜಯಪ್ರಕಾಶ್ ಶೆಟ್ಟಿ ಎ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಣುಕಾ ಎಸ್. ರೈ., ಮಾತೃಮಂಡಳಿಯ ಸಂಚಾಲಕಿ ಸವಿತಾಲಕ್ಷ್ಮಿ ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿಯರಾದ ಭಾರತಿ ನಿರೂಪಿಸಿ, ಸಂಧ್ಯಾ ಧನ್ಯವಾದ ಸಮರ್ಪಿಸಿದರು.