“ಕಲೆ, ಸಾಹಿತ್ಯ, ಸಂಗೀತ ಮನಸ್ಸಿಗೆ ಆನಂದ ನೀಡುವುದು. ಅಂತರಂಗ-ಬಹಿರಂಗ ಉದ್ಧೀಪನವಾಗಲು ಭಗವಂತನ ಆರಾಧನೆ ಅಗತ್ಯ. ದೇವಿಯ ಆರಾಧನೆ ಎಂದರೆ ಅದು ಪ್ರಕೃತಿಯ ಆರಾಧನೆ. ಸಂಸ್ಕ್ರತಿಯ ಜೊತೆಗೆ ಪ್ರಕೃತಿಯ ಉಳಿವಾಗಬೇಕು. ಜೀವನವೇ ಒಂದು ಕಲೆಯಾಗಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಸಂಪನ್ನಗೊಂಡ ಶ್ರೀ ಲಲಿತಾ ಪಂಚಮಿ ಮಹೋತ್ಸವದ ಧರ್ಮಸಭೆಯಲ್ಲಿ ಸಂದೇಶ ನೀಡಿದರು.
ಈ ಸುಸಂದರ್ಭ ಉಪಸ್ಥಿತರಿದ್ದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನಗೈದು “ಲೌಕಿಕ ಮತ್ತು ಅಲೌಕಿಕ ಸಂಪತ್ತನ್ನು ಕರುಣಿಸುವವಳು ಜಗನ್ಮಾತೆ. ಕಲಾವಿದ ಮತ್ತು ಕಲೆಗೆ ತಾಯಿ-ಮಕ್ಕಳ ಸಂಬಂದವಿದೆ” ಎಂದರು.
ಯಕ್ಷಗಾನ ಶಿಕ್ಷಕ ಶ್ರಿ ಕರ್ಗಲ್ಲು ವಿಶ್ವೇಶ್ವರ ಭಟ್, ಯಕ್ಷಗಾನ ಕಲಾವಿದ ಶ್ರೀ ಕಿನ್ನಿಗೋಳಿ ಮುಖ್ಯಪ್ರಾಣ ಶೆಟ್ಟಿಗಾರ್, ತುಳು ರಂಗಭೂಮಿ ಮತ್ತು ಚಲನಚಿತ್ರ ಸಂಗೀತ ನಿರ್ದೇಶಕ ಶ್ರೀ ಎ.ಕೆ. ವಿಜಯ ಕೋಕಿಲ, ಕಾಟಿಪಳ್ಳ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಯತೀಶ್ ರೈ, ನಾಟ್ಯನಿಲಯ (ರಿ.) ಉಳ್ಳಾಲ ಇದರ ನಾಟ್ಯವಿಸುಷಿ ಶ್ರೀಮತಿ ಸುನೀತಾ ಜಯಂತ್ ಉಳ್ಳಾಲ ಇವರಿಗೆ ಪೂಜ್ಯ ಶ್ರೀಗಳವರು ಶ್ರೀ ಗುರುದೇವಾನುಗ್ರಹ ಪುರಸ್ಕಾರ ನೀಡಿ ಹರಸಿದರು.
ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ದಾವಣಗೆರೆ ಘಟಕದ 11ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಪೂಜ್ಯ ಶ್ರೀಗಳವರು ಬಿಡುಗಡೆಗೊಳಿಸಿದರು. ಮುಂಬೈನ ಉದ್ಯಮಿ ಶ್ರೀ ವಾಮಯ್ಯ ಬಿ. ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಮುಂಬೈ ಘಟಕದ ಅಧ್ಯಕ್ಷೆ ಶ್ರೀಮತಿ ರೇವತಿ ವಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಶ್ರೀ ಟಿ. ತಾರಾನಾಥ ಕೊಟ್ಟಾರಿ ಸ್ವಾಗತಿಸಿ ಪ್ರಸ್ತಾವನೆಗೈದರು. ಶ್ರೀ ಯಶವಂತ ವಿಟ್ಲ, ಶಿಕ್ಷಕ ಶ್ರೀ ಶರತ್ಕುಮಾರ್ ಆಳ್ವ, ಜೈ ಗುರುದೇವ್ ಕಲಾಕೇಂದ್ರದ ಕಾರ್ಯದರ್ಶಿ ಶ್ರೀ ಸುಖೇಶ ಭಂಡಾರಿ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಗ್ರಾಮ ಸಂಯೋಜಕಿ ಶ್ರೀಮತಿ ಲೀಲಾ ಹಾಗೂ ಕು| ವೀಕ್ಷಾ ರೈ ಸನ್ಮಾನಿತರನ್ನು ಪರಿಚಯಿಸಿದರು. ಒಡಿಯೂರು ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್. ರೈ ಆಶಯಗೀತೆ ಹಾಡಿದರು.
ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಬಂಟ್ವಾಳ ತಾಲೂಕು ವಿಸ್ತರಣಾಧಿಕಾರಿ ಶ್ರೀ ಸದಾಶಿವ ಅಳಿಕೆ ವಂದಿಸಿ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಪ್ರೌಢಶಾಲಾ ಮುಖ್ಯಶಿಕ್ಷಕ ಶ್ರೀ ಎ. ಜಯಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.