ಮಂಚಿ ಮಾ.28: “ದೀಪದ ಬೆಳಕಿನಿಂದಲೇ ಅದರ ಮಹತ್ವ ಜಗತ್ತಿಗೆ ತಿಳಿಯುತ್ತದೆ. ಅದೆ ರೀತಿ ಸಾಧಕ ತನ್ನ ಕೆಲಸದ ಮೂಲಕವೇ ತನ್ನ ಸಾಧನೆಯನ್ನು ತಿಳಿಸುತ್ತಾನೆ“ ಎಂದು ಮಂಚಿ ಕನಕಗಿರಿಯ ಶ್ರೀ ಗೋಪಾಲಕೃಷ್ಣ ಸೇವಾ ವಿಶ್ವಸ್ಥ ಮಂಡಳಿಯಲ್ಲಿ ಧರ್ಮ ಜಾಗರಣ ಪ್ರತಿಷ್ಠಾನ ಮಂಚಿ-ಇರಾ ವಿಂಶತಿ ಕಾರ್ಯಕ್ರಮ ಅಂಗವಾಗಿ ಸಂಸ್ಕಾರ, ಸಂಘಟನೆ ಲೋಕ ಕಲ್ಯಾಣಾರ್ಥ ಆಯೋಜಸಲಾದ ಧಾರ್ಮಿಕ ಮಹೋತ್ಸವ, ಶ್ರೀ ಮಹಾಗಣಪತಿ ಹೋಮ, ಚಂಡಿಕಾ ಯಾಗ, ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಶ್ರೀ ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಧಾರ್ಮಿಕ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ ವತಿಯಿಂದ ಪೂಜ್ಯ ಒಡಿಯೂರು ಶ್ರೀಗಳವರಿಗೆ 60 ಶ್ವೇತವರ್ಣದ ಗುಲಾಬಿಯ ಹಾರವನ್ನು ಸಮರ್ಪಿಸಿ ನಂದಾದೀಪವನ್ನು ನೀಡಿ 60ರ ಅಭಿನಂದನೆಯನ್ನು ಸಲ್ಲಿಸಲಾಯಿತು.
ಶೃಂಗೇರಿ ಮಠದ ಕೋಟೆಕಾರಿನ ಆಡಳಿತಾಧಿಕಾರಿ ಶ್ರೀ ಸತ್ಯಶಂಕರ ಬೊಳ್ಳಾವ ಅಧ್ಯಕ್ಷತೆ ವಹಿಸಿದರು. ತುಳು ಸಾಹಿತ್ಯ ಅಕಾಡೆÀಮಿ ಮಾಜಿ ಅಧ್ಯಕ್ಷ ಶ್ರೀ ಎ.ಸಿ. ಭಂಡಾರಿ, ಪ್ರಮುಖರಾದ ಶ್ರೀ ಚಿದಾನಂದ ರಾವ್ ಪತ್ತು ಮುಡಿ, ಟ್ರಸ್ಟಿ ಶ್ರೀ ಸೀತಾರಾಮ ಶೆಟ್ಟಿ, ಶ್ರೀ ರಾಮಕೃಷ್ಣ ಮಂಚಿ ಕೋಕಳ ಉಪಸ್ಥಿತರಿದ್ದರು.
ಶ್ರೀ ಸತೀಶ್ ಕುಕ್ಕಾಜೆಬೈಲು ಸ್ವಾಗತಿಸಿದರು. ಧರ್ಮ ಜಾಗರಣಾ ಪ್ರತಿಷ್ಠಾನ ಅಧ್ಯಕ್ಷ ಶ್ರೀ ಕೈಯೂರು ನಾರಾಯಣ ಭಟ್ ಪ್ರಾಸ್ತಾವನೆಗೈದರು. ಶ್ರೀ ಈಶ್ವರ ಭಟ್ ಕೈಯೂರು ಒಡಿಯೂರು ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು. ಶ್ರೀ ತಿರುಮಲೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.