“ಸಾಧಕನ ಬದುಕು ಸೌಜನ್ಯದಿಂದ ಕೂಡಿರುತ್ತದೆ. ಆದರೆ ಅದು ದೌರ್ಬಲ್ಯವಲ್ಲ. ಧರ್ಮವನ್ನು ಮರೆತು ರಾಷ್ಟ್ರದ ಪ್ರಗತಿ ಅಸಾಧ್ಯ. ಧರ್ಮದಲ್ಲಿ ರಾಜಕೀಯ ಇರಬಾರದು. ಆದರೆ ರಾಜಕೀಯದಲ್ಲಿ ಧರ್ಮವಿರಬೇಕು. ಧರ್ಮ ಮತ್ತು ಸಂಸ್ಕøತಿ ಬದುಕಿನ ಶ್ವಾಸವಾಗಿರಬೇಕು. ಪ್ರತಿಯೊಬ್ಬರೂ ಸಂಸ್ಕøತಿಯ ವಾರಸುದಾರರಾಗಬೇಕು. ಯುವಕರು ದುಶ್ಚಟಗಳಿಂದ ದೂರವಿರಬೇಕು. ಜನ್ಮದಿನೋತ್ಸವ ಸತ್ಕಾರ್ಯಗಳಿಗೆ ಮೀಸಲಾಗಿರಲಿ, ಆದರ್ಶವಾಗರಲಿ. ಅನ್ಯರಿಗೆ ಪ್ರೇರಣೆಯಾಗಿರಲಿ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಆಯೋಜಿಸಿದ್ದ ಶ್ರೀ ಒಡಿಯೂರು ಗ್ರಾಮೋತ್ಸವ 2019-ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ-ಗುರುವಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗುರುವಂದನೆ ಸ್ವೀಕರಿಸಿ ಜನ್ಮದಿನದ ಸಂದೇಶ ನೀಡಿದರು.
ಈ ಸಂದರ್ಭ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಗ್ರಾಹಕ ಉಪಯೋಗಿ ಮೊಬೈಲ್ ಅಪ್ಲಿಕೇಶನ್ನನ್ನು ಪೂಜ್ಯ ಶ್ರೀಗಳವರು ಅನಾವರಣಗೊಳಿಸಿದರು. ಪೆನ್ಸಿಲ್ ಬಾಕ್ಸ್ ಕನ್ನಡ ಚಲನಚಿತ್ರದ ಹಾಡುಗಳ ಬಿಡುಗಡೆಗೈದು ಆಶೀರ್ವಚನ ನೀಡಿದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು “ಸತ್ಸಂಗ, ಸತ್ಕಾರ್ಯ, ಸಚ್ಚಿಂತನೆ, ಗುರುಗಳ ಮಾರ್ಗದರ್ಶನ ಪಡೆದು ಮಾಡುವ ಕಾರ್ಯ ಯಶಸ್ವಿಯಾಗುತ್ತದೆ” ಎಂದರು.
ನವನಿಕೇತನ ಯೋಜನೆಯಡಿಯಲ್ಲಿ ನಿರ್ಮಾಣವಾದ ಮನೆಯ ಕೀಲಿಕೈಯನ್ನು ಫಲಾನುಭವಿಗಳಾದ ಪೆರುವಾಯಿಯ ಶ್ರೀಮತಿ ಚಂದ್ರಾವತಿ ನಾಯ್ಕ ಅಡ್ವಾಯಿ ಅವರಿಗೆ ನೀಡಲಾಯಿತು. ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದವರ ವತಿಯಿಂದ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠಕ್ಕೆ ನೀಡಲಾದ ಶಾಲಾ ಬಸ್ಸಿನ ಕೀಲಿಕೈಯನ್ನು ಹಸ್ತಾಂತರಿಸಿದರು.
ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಉಡುಪಿಯ ಯೋಜನೆಯ ಸದಸ್ಯೆಯ ಪುತ್ರಿ ಸುಮನ ಮಾಧವ ಸುವರ್ಣ ಇವರನ್ನು ಶ್ರೀ ಸಂಸ್ಥಾನದಿಂದ ಗೌರವಿಸಲಾಯಿತು.
ವಿಶೇಷ ಆಹ್ವಾನಿತರಾದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ವೇ|ಮೂ| ಕಮಲಾದೇವಿ ಪ್ರಸಾದ ಅಸ್ರಣ್ಣ ಶುಭಹಾರೈಸಿದರು.
ವೇ|ಮೂ| ಚಂದ್ರಶೇಖರ ಉಪಾಧ್ಯಾಯ ಮತ್ತು ಬಳಗದವರ ವೈದಿಕ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ನಮ್ಮ ಕುಡ್ಲ ತುಳು ಚ್ಯಾನೆಲ್ ಆಡಳಿತ ನಿರ್ದೇಶಕ ಲೀಲಾಕ್ಷ ಕರ್ಕೇರ, ಶ್ರೀ ಮಹಾಬಲ ಶೆಟ್ಟಿ ಪಟ್ಲಗುತ್ತು, ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಲೋಕನಾಥ ಜಿ.ಶೆಟ್ಟಿ ತಾಳಿಪ್ಪಾಡಿಗುತ್ತು, ಒಡಿಯೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಎ. ಅಶೋಕ್ ಕುಮಾರ್ ಬಿಜೈ ಕಾಪಿಕ್ಕಾಡ್, ಪುಣೆ ಘಟಕದ ಪ್ರಧಾನ ಕಾರ್ಯದರ್ಶಿ ರೋಹಿತ್ ಡಿ.ಶೆಟ್ಟಿ ನಗ್ರಿಗುತ್ತು, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ.ಶೆಟ್ಟಿ, ಮುಂಬೈ ಘಟಕದ ಅಧ್ಯಕ್ಷೆ ಶ್ರೀಮತಿ ರೇವತಿ ವಾಮಯ್ಯ ಶೆಟ್ಟಿ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಉಡುಪಿ ವಲಯದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕಬ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಲ| ಎ. ಸುರೇಶ್ ಸಹಕಾರಿಯ ಗ್ರಾಹಕ ಉಪಯೋಗಿ ಮೊಬೈಲ್ ಅಪ್ಲಿಕೇಶನ್ನ ಬಗ್ಗೆ ಮಾಹಿತಿಯನ್ನು ಸಭೆಯ ಮುಂದಿಟ್ಟರು. ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಸಮಿತಿಯ ಉಪಾಧ್ಯಕ್ಷ ಶ್ರೀ ಯಶವಂತ ವಿಟ್ಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಸದಾಶಿವ ಅಳಿಕೆ ಪ್ರಸ್ತಾವನೆಗೈದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಶ್ರೀ ಕಿರಣ್ ಉರ್ವ ಯೋಜನೆಯ ವರದಿ ಮಂಡಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್. ರೈ, ಶ್ರೀ ರವಿರಾಜ ಶೆಟ್ಟಿ ಬಳಗ ಆಶಯಗೀತೆ ಹಾಡಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯಶಿಕ್ಷಕ ಶ್ರೀ ಎ. ಜಯಪ್ರಕಾಶ ಶೆಟ್ಟಿ ಹಾಗೂ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮುಂಬೈ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಪೇಟೆಮನೆ ಪ್ರಕಾಶ್ ಕೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಂಚಾಲಕ ಶ್ರೀ ಸೇರಾಜೆ ಗಣಪತಿ ಭಟ್ ವಂದಿಸಿದರು. ಸಂಯೋಜಕಿ ಶ್ರೀಮತಿ ಲೀಲಾ, ಶ್ರೀಮತಿ ಕಾವ್ಯ, ಶ್ರೀಮತಿ ರಕ್ಷಿತಾ ಸದಾಶಿವ ಶೆಟ್ಟಿ ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ ವಾಚಿಸಿದರು.
ವಿವಿಧ ಕಾರ್ಯಕ್ರಮಗಳು:
ಶ್ರೀ ಗಣಪತಿ ಹವನ, ನಾಮ ಸಂಕೀರ್ತನೆ, ಪರಮಪೂಜ್ಯ ಶ್ರೀ ಗುರುಗಳಿಗೆ ಪೂರ್ಣಕುಂಭ ಸ್ವಾಗತ, ಶ್ರೀಗುರು ಪಾದುಕಾರಾಧನೆ, ಗುರುಕುಲದ ಪುಟಾಣಿಗಳಿಂದ ಪೂಜ್ಯ ಶ್ರೀಗಳಿಗೆ ಗುರುನಮನ, ಉಯ್ಯಾಲೆ ಸೇವೆ, ಲಡ್ಡುಗಳಿಂದ ತುಲಾಭಾರ ಸೇವೆ, ನಡೆಯಿತು. ಗ್ರಾಮೋತ್ಸವದ ಪ್ರಯುಕ್ತ ಆಯೋಜಿಸಿದ್ದ ಹೊರಾಂಗಣ ಆಟೋಟಗಳು, ಕೆಸರುಗದ್ದೆ ಆಟೋಟಗಳು, ಒಳಾಂಗಣ ಸ್ಪರ್ಧೆಗಳ ವಿಜೇತರಿಗೆ ಹಾಗೂ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಬಂಟ್ವಾಳ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಔಷಧೀಯ ಸಸಿಗಳ ವಿತರಣೆ, ಸಂಘ ಸಂಸ್ಥೆಗೆ ನೆರವು, ಅನಾರೋಗ್ಯಕ್ಕೆ ನೆರವು, ಮನೆ ನಿರ್ಮಾಣ ಹಾಗೂ ದುರಸ್ತಿಗೆ ನೆರವು ನೀಡಲಾಯಿತು.