“ಎಲ್ಲಿ ತ್ಯಾಗವಿದೆಯೋ ಅಲ್ಲಿ ಶಾಂತಿ, ನೆಮ್ಮದಿಯಿದೆ. ನಾವು ಎಲ್ಲರೊಂದಿಗೂ ಪ್ರೀತಿಯಿಂದ ಬದುಕುವುದನ್ನು ಕಲಿಯಬೇಕು. ಅದರೊಂದಿಗೆ ಸಮಾಜಕ್ಕಾಗಿ ಬದುಕಬೇಕು. ಸಮಾಜಸೇವೆಯಲ್ಲಿ ಯಾವುದೇ ಫಲಾಪೇಕ್ಷೆ ಇರಬಾರದು. ಆಗ ಮಾತ್ರ ನಮ್ಮ ಜೀವನವು ಉತ್ತಮ ಸಮಾಜಪರ ಚಿಂತನೆಯುಳ್ಳ ಬದುಕನ್ನು ರೂಪಿಸಲು ಸಾಧ್ಯ. ಯುವಶಕ್ತಿ ದೇಶದ ಬೆನ್ನೆಲುಬಾಗಿದ್ದು, ಅವರು ಅಡ್ಡದಾರಿ ಹಿಡಿಯದಂತೆ ನೋಡಿಕೊಳ್ಳಬೇಕು. ಧರ್ಮ-ಸಂಸ್ಕøತಿಯನ್ನು ಅರಿತು ಬಾಳಿದಾಗ ಉತ್ತಮ ಬದುಕು ನಿರ್ಮಾಣವಾಗಲು ಸಾಧ್ಯ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಮುಂಬೈನ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ. ಭಂಡಾರಿ ಸಭಾಗೃಹಲ್ಲಿ ನಡೆದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಮುಂಬೈ, ಮಹಾರಾಷ್ಟ್ರ ಘಟಕದ 20ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶೀರ್ವಚನಗೈದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನಗೈದು “ಸುಸಂಸ್ಕøತ ಸಮಾಜದ ನಿರ್ಮಾಣವೇ ಗುರುಗಳ ಉದ್ದೇಶವಾಗಿದೆ” ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬಂಟರ ಸಂಘದ ಅಧ್ಯಕ್ಷ ಶ್ರೀ ಪದ್ಮನಾಭ ಎಸ್. ಪಯ್ಯಡೆ ಮಾತನಾಡಿ “ಪೂಜ್ಯ ಶ್ರೀಗಳವರ ಸಾಮಾಜಿಕ ಕಳಕಳಿ ಮೆಚ್ಚುವಂತದ್ದು. ನಮ್ಮಲ್ಲಿ ದೃಢ ನಿರ್ಧಾರ ಇದ್ದಾಗ ಮಾತ್ರ ಯಾವುದೇ ಕಾರ್ಯ ಅಸಾಧ್ಯವಲ್ಲ. ಶ್ರೀಗಳವರ ಪ್ರೇರಣೆಯಿಂದ ಉತ್ತಮ ಸಮಾಜ ನಿರ್ಮಾಣವಾಗಲಿ” ಎಂದು ಶುಭಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿ ಬರೋಡಾ ತುಳು ಸಂಘದ ಅಧ್ಯಕ್ಷ ಶ್ರೀ ಶಶಿಧರ ಶೆಟ್ಟಿ ಮಾತನಾಡಿ “ಒಡಿಯೂರು ಶ್ರೀಗಳು ಸಮಾಜದ ಒಳಿತಿಗಾಗಿ ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ದಾರೆ. ತುಳು ಭಾಷೆಯನ್ನು ಉಳಿಸಿ-ಬೆಳೆಸುವಲ್ಲಿ ಅವರು ಮಾಡುತ್ತಿರುವ ಸೇವೆ ಅಭಿನಂದನೀಯ. ಅವರ ಅನುಗ್ರಹದಿಂದ ತುಳುಭಾಷೆಯು 8ನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳ್ಳಲಿ” ಎಂದರು.
ನೆರುಲ್ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಮಂದಿರದ ಅಧ್ಯಕ್ಷ ಶ್ರೀ ಸಂಜೀವ ಶೆಟ್ಟಿ, ಬಂಟರ ಸಂಘ, ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ರಂಜನಿ ಎಸ್. ಹೆಗ್ಡೆ, ತುಳು ಸಂಘ ಅಂಕ್ಲೇಶ್ವರದ ಅಧ್ಯಕ್ಷ ಶ್ರೀ ಶಂಕರ ಶೆಟ್ಟಿ, ಸೂರತ್ನ ಉದ್ಯಮಿ ಶ್ರೀ ಶಿವರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಪುಣೆ ಬಳಗದ ಪ್ರಧಾನ ಕಾರ್ಯದರ್ಶಿ ಶ್ರೀ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು, ಮುಂಬೈ ಬಳಗದ ಉಪಾಧ್ಯಾಕ್ಷ ಶ್ರೀ ಚಂದ್ರಹಾಸ ಎಂ. ರೈ ಬೋಳ್ನಾಡುಗುತ್ತು, ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ರೇವತಿ ವಾಮಯ್ಯ ಬಿ. ಶೆಟ್ಟಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬಳಗದ ಹಿರಿಯ ಸದಸ್ಯರಾದ ಹೋಟೆಲ್ ರಾಮದೇವ್ನ ಮ್ಹಾಲಕ ಶ್ರೀ ಸುಂದರ್ ಶೆಟ್ಟಿ, ಉದ್ಯಮಿ ಮೇರ್ಕಳ ತ್ಯಾಂಪಣ್ಣ ಶೆಟ್ಟಿ, ಶ್ರೀ ಆನಂದ ಕೆ. ಕೋಟ್ಯಾನ್ ಹಾಗೂ ಶ್ರೀಮತಿ ಜಯಂತಿ ವಿಶ್ವನಾಥ ಬಂಗೇರ ಇವರನ್ನು ಸಮ್ಮಾನಿಸಲಾಯಿತು.
ಒಡಿಯೂರು ಶ್ರೀ ಯುವಸೇವಾ ಬಳಗದ ವತಿಯಿಂದ ವೈದ್ಯಕೀಯ ನೆರವನ್ನು ವಿತರಿಸಲಾಯಿತು. ಶ್ರೀ ಸಂಸ್ಥಾನಕ್ಕೆ ವಿದ್ಯಾನಿಧಿಗೆ ನಿಧಿಯನ್ನು ಸಮರ್ಪಿಸಿದರು.
ಬಳಗದ ಅಧ್ಯಕ್ಷ ನ್ಯಾಯವಾದಿ ಶ್ರೀ ಕೃಷ್ಣ ಎಲ್. ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಪೇಟೆಮನೆ ಪ್ರಕಾಶ್ ಕೆ. ಶೆಟ್ಟಿ ಮತ್ತು ಶ್ರೀ ಸುನಿಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಉದ್ಯಮಿ ಶ್ರೀ ಶ್ರೀನಿವಾಸ ಶೆಟ್ಟಿ ದಂಪತಿಗಳು ಶ್ರೀ ಗುರುಪಾದುಕಾಪೂಜೆ ನೆರವೇರಿಸಿದರು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ, ಕಾಟಿಪಳ್ಳ ಇವರಿಂದ ‘ಇಂದ್ರಜಿತು ಕಾಳಗ-ರಾವಣ ವಧೆ’ ಯಕ್ಷಗಾನ ಪ್ರದರ್ಶನಗೊಂಡಿತು.