ಜ್ಞಾನದಿಂದ ಕೂಡಿರುವ ಇಚ್ಚಾಶಕ್ತಿ ಮತ್ತು ಕ್ರೀಯಾಶಕ್ತಿ ದೇಶವನ್ನು ಕಟ್ಟುವಲ್ಲಿ ಸಹಕರಿಯಾಗುತ್ತದೆ. ಸಮಾಜದಲ್ಲಿ ನಡೆಯುತ್ತಿರುವ ಗೊಂದಲಗಳಿಗೆ ಅಂತ್ಯ ಹಾಡಬೇಕಾದರೆ ಸಮಾಜಕ್ಕೆ ಒಂದಿಷ್ಟು ಸಂಸ್ಕಾರದ ಬೀಜವನ್ನು ಬಿತ್ತುವ ಕಾರ್ಯವಾಗಬೇಕಾಗಿದೆ. ನಾವು ನಾವಾಗಿ ನಮ್ಮ ಅಂತರಂಗದಲ್ಲಿ ಶಾಂತಿಯನ್ನು ಸ್ಥಾಪಿಸುವ ಪಣತೊಟ್ಟಾಗ ಮಾತ್ರ ಶರದೃತು ಸಂಸ್ಕಾರ ಶಿಬಿರಕ್ಕೆ ಮೌಲ್ಯ ದೊರೆಯುತ್ತದೆ. ನಮ್ಮಲ್ಲಿ ಪರಿಪೂರ್ಣತೆಯ ದಾರಿಯನ್ನು ಕಂಡರೆ ಪರಮಾತ್ಮ ನಮಗೆ ಒಲಿಯುತ್ತಾನೆ. ನಮ್ಮ ಬದುಕನ್ನು ನಾವೇ ರೂಪಿಸುತ್ತಾ ಮುಂದೆ ಸಾಗೋಣ ಎಂದು ಒಡಿಯೂರು ಪರಮಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಅ. 10 ರಂದು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಿಂದ ಆಯೋಜನೆಗೊಂಡ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ನಡೆಯುತ್ತಿರುವ ಮೂರು ದಿನಗಳ ಶರದೃತು ಸಂಸ್ಕಾರ ಶಿಬಿರವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅತಿಥಿಗಳಾದ ಮುಂಬೈ ಉದ್ಯಮಿ ದಯಾನಂದ ಪೂಂಜ, ಮೋಹನ್ ಹೆಗ್ಡೆ ಥಾನೆ, ಪತ್ರಕರ್ತ ರಾಕೇಶ್ ಪೂಂಜ, ನಿವೃತ್ತ ಶಿಕ್ಷಕಿ ಶಾರದಾ ನೂಜಿಬೈಲು, ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯ ಜಯಪ್ರಕಾಶ್ ಶೆಟ್ಟಿ, ಶಾಲಾ ಹಿರಿಯ ವಿದ್ಯಾರ್ಥಿ ಮಂಜುನಾಥ ,ಶಿಬಿರದ ನಾಯಕ ಶೈಲೇಶ್ ಶರ್ಮ ಮತ್ತು ನಾಯಕಿ ಪಯಸ್ವಿನಿ ಅಳಿಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಾಲಾ ಸಂಚಾಲಕ ಸೇರಾಜೆ ಗಣಪತಿ ಭಟ್ ಪ್ರಾಸ್ತವಿಕ ಮಾತುಗಳನ್ನಾಡಿ ವಿದ್ಯಾಪೀಠದ ವಿದ್ಯಾರ್ಥಿನಿ ಅನನ್ಯಲಕ್ಷ್ಮಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ರಜತ್ ಕಾರ್ಯಕ್ರಮ ನಿರೂಪಿಸಿ, ಮಹೇಶ್ ಟಿ ವಂದಿಸಿದರು.
ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಣುಕಾ ಎಸ್. ರೈ ಶಿಬಿರಗೀತೆಯನ್ನು ನಡೆಸಿಕೊಟ್ಟರು .ಬಳಿಕ ಮೈತ್ರೇಯಿ ಗುರುಕುಲದ ಭಗಿನಿಯರಾದ ಗಾಯತ್ರಿ, ವನಜ, ಶೈಲಶ್ರೀ ಯೋಗಾಭ್ಯಾಸವನ್ನು ನಡೆಸಿಕೊಟ್ಟರು. ಸಂಪನ್ಮೂಲ ವ್ಯಕ್ತಿ ನಿವೃತ ಶಿಕ್ಷಕಿ ಶ್ರೀಮತಿ ಶಾರದಾ ಯಸ್ ರಾವ್ ಕರಕುಶಲ ತಯಾರಿಗಳನ್ನು ಮಕ್ಕಳಿಗೆ ಹೇಳಿಕೊಟ್ಟರು. ಕಾgರ್ಯಕ್ರಮ ಶಾಂತಿಮಂತ್ರದೊಂದಿಗೆ ಮುಕ್ತಾಯವಾಯಿತು..