ಒಡಿಯೂರು, ಸೆ.19: “ವಿಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿರುವುದು ಸಹಜ. ವಿಜ್ಞಾನದಲ್ಲಿ ಪರಿಶ್ರಮದಿಂದ ಯಶಸ್ಸನ್ನು ಕಾಣಲು ಸಾಧ್ಯ. ಹಾಗೆಯೇ ದಕ್ಷತೆ, ಶಿಸ್ತನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕಿನಲ್ಲಿ ನಾವು ಯಶಸ್ಸನ್ನು ಕಾಣಬಹುದು. ಆ ಮೂಲಕ ಸಮಾಜದಲ್ಲಿ ಉನ್ನತ ಮಟ್ಟಕ್ಕೇರಬಹುದು. ಬದುಕಿನ ಪ್ರತಿಯೊಂದು ಕ್ಷಣವು ನಮಗೆ ಪಾಠವಾಗಿರುತ್ತದೆ. ಗುಣಮಟ್ಟದ ಶಿಕ್ಷಣದಿಂದ ನಾವು ಹೆಚ್ಚು ಸಂಸ್ಕಾರವಂತರಾಗುತ್ತೇವೆ” ಎಂದು ಒಡಿಯೂರು ಶ್ರೀ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನಗೈದರು.
ಒಡಿಯೂರು ಶ್ರೀ ಗುರುದೇವ ಐ.ಟಿ.ಐ.ಯಲ್ಲಿ ಆಯೋಜಿಸಲಾದ “ಇಂಜಿನಿಯರ್ಸ್ ಡೇ” ಕಾರ್ಯಕ್ರಮದಲ್ಲಿ ದೀಪೋಜ್ವಲನಗೈದು ಪೂಜ್ಯ ಶ್ರೀಗಳವರು ಸರ್| ಎಂ. ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಇಂಜಿನಿಯರ್ಸ್ ಡೇಯ ಪ್ರಯುಕ್ತ ಏರ್ಪಡಿಸಲಾದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಮುಖ್ಯ ಅತಿಥಿಗಳಾದ ವಿಟ್ಲ ಲಯನ್ಸ್ ಕ್ಲಬ್ನ ಅಧ್ಯಕ್ಷ, ಸಿವಿಲ್ ಇಂಜಿನೀಯರ್ ಶೆಲ್ಟರ್ ಅಸೋಸಿಯೆಟ್ಸ್ನ ಪಾಲುದಾರ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಇವರು ಮಾತನಾಡಿ “ತಾಂತ್ರಿಕ ಕೈಗಾರಿಕಾ ತರಬೇತಿ ಸಂಸ್ಥೆ ಸ್ವಾವಲಂಬಿಯಾಗಿ ಬದುಕಲು ಸಹಕಾರಿಯಾಗಲಿ” ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮೆಸ್ಕಾಂ ಕನ್ಯಾನ ಶಾಖೆಯ ಶಾಖಾಧಿಕಾರಿ ಶ್ರೀ ಕಾರ್ತಿಕ್ ಸಿ.ಆರ್. ಅವರು ಮಾತನಾಡಿ ಸರ್| ಎಂ. ವಿಶ್ವೇಶ್ವರಯ್ಯನವರು ಇಂಜಿನಿಯರ್ ವಿಭಾಗದಲ್ಲಿ ಮಾಡಿದ ಸಾಧನೆ ಹಾಗೂ ದಿವಾನರಾಗಿದ್ದಾಗ ನಿರ್ವಹಿಸಿದ ಪ್ರಾಮಾಣಿಕ ಕರ್ತವ್ಯಗಳನ್ನು ವಿವರಿದರು. ಒಡಿಯೂರು ಶ್ರೀ ವಿವಿಧೊದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕ ಶ್ರೀ ಪಿ. ಲಿಂಗಪ್ಪ ಗೌಡ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ ಉಪಸ್ಥಿತಿದ್ದರು.
ಒಡಿಯೂರು ಶ್ರೀ ಗುರುದೇವ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಶ್ರೀ ಎಂ. ಅಶ್ವಥ್ ಅವರು, ಸರ್| ಎಂ. ವಿಶ್ವೇಶ್ವರಯ್ಯನವರ ಮಹಾನ್ ಸಾಧನೆಯ ಬಗ್ಗೆ ಮಾತನಾಡಿದರು.
ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಕರುಣಾಕರ ಎನ್.ಬಿ. ಸ್ವಾಗತಿಸಿದರು. ವಿದ್ಯಾರ್ಥಿ ಮಹಮ್ಮದ್ ಇರ್ಷಾದ್ ವಂದಿಸಿ, ಸಲ್ಮಾನ್ ಫಾರಿಸ್ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು.