ವಿದ್ಯಾರ್ಥಿಗಳ ಕಲಾಪ್ರತಿಭೆಗಳು ಅನಾವರಣಗೊಳ್ಳಲು ವಾರ್ಷಿಕೋತ್ಸವದಂತಹ ಕಾರ್ಯಕ್ರಮಗಳು ಸಾಕ್ಷಿಯಾಗುತ್ತದೆ. ಯಾಂತ್ರಿಕ ಯುಗಕ್ಕೆ ಹೊಂದಿಕೊಂಡು ಜೀವಿಸುವುದು ಇಂದಿನ ಅನಿವಾರ್ಯವಾಗಿದೆ. ಆರ್ಥಿಕ ಅವಶ್ಯಕತೆಗಳ ಪೂರೈಕೆಗೆ ಪ್ರ್ರಾಮಾಣಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮವಾದ ಬದುಕನ್ನು ರೂಪಿಸಲು ಸಾಧ್ಯ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ಐ.ಟಿ.ಐ ಕನ್ಯಾನದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಾಕ್ಷ್ಯ ಚಿತ್ರವನ್ನು ಬಿಡುಗಡೆಗೊಳಿಸಿ ಆಶೀರ್ವಚನಗೈದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕನ್ಯಾನ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾದ ಶ್ರೀ ವಿಜಯಶಂಕರ್ ಆಳ್ವ ಅವರು ಮಾತನಾಡುತ್ತಾ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ನಂತರ ತಾಂತ್ರಿಕ ಶಿಕ್ಷಣದ ಮೌಲ್ಯ, ಇದರ ಪ್ರಯೋಜನ ಹಾಗೂ ದೇಶದ ಅಭಿವೃದ್ದಿಯಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪಾತ್ರವನ್ನು ಅವಲೋಕಿಸಬೇಕು. ವಿದ್ಯಾರ್ಥಿಗಳಲ್ಲಿ ನಿರಂತರ ಪ್ರಯತ್ನವಿದ್ದರೆ ಮಾತ್ರವೇ ಸರಿಯಾದ ಗುರಿಯನ್ನು ತಲುಪಲು ಸಾಧ್ಯವೆಂದು ವಿವರಿಸಿದರು.
ಒಡಿಯೂರು ಶ್ರೀ ವಿವಿಧೊದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಲ| ಸುರೇಶ್ ರೈಯವರು ನಮ್ಮ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸ್ವ-ಉದ್ಯೋಗವನ್ನು ಮಾಡಲು ಬಡ್ಡಿ ರಹಿತ ಸಾಲದ ಸೌಲಭ್ಯ ವ್ಯವಸ್ಥೆ ಮಾಡಲಾಗುವುದೆಂದರು.
ಕನ್ಯಾನ ಸರಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿಯಾಗಿರುವ ಶ್ರೀಮತಿ ಸವಿತಾ ಕೆ. ಅವರು ಸತ್ಸಂಗದಿಂದ ನಮ್ಮ ಜೀವನದ ಮೌಲ್ಯಗಳು ಔನ್ನತ್ಯವನ್ನು ಹೊಂದುತ್ತದೆ. ಸ್ವಾವಲಂಬಿಗಳಾಗಿ ಬದುಕಲು ಕೈಗಾರಿಕಾ ತರಬೇತಿ ಸಂಸ್ಥೆ ಸಹಕಾರಿಯಾಗುತ್ತದೆ ಎಂದು ಶುಭ ಹಾರೈಸಿದರು.
ಒಡಿಯೂರು ಶ್ರೀ ಸಂಸ್ಥಾನದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕರಾದ ಶ್ರೀ ತಾರಾನಾಥ ಕೊಟ್ಟಾರಿ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯೋಪಾಧ್ಯಾಯರಾದ ಶ್ರೀ ಜಯಪ್ರಕಾಶ ಶೆಟ್ಟಿ, ಒಡಿಯೂರು ಶ್ರೀ ವಿ.ಸೌ.ಸ.ನಿ. ನಿರ್ದೇಶಕರಾದ ಶ್ರೀ ಲಿಂಗಪ್ಪ ಗೌಡ ಪನೆಯಡ್ಕ, ಕನ್ಯಾನ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರಾದ ಶ್ರೀ ಕೆ.ಪಿ.ರಘುರಾಮ ಶೆಟ್ಟಿ ಕನ್ಯಾನ ಮುಂತಾದವರು ಉಪಸ್ಥಿತರಿದ್ದರು.
ನಮ್ಮ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಕರುಣಾಕರ ಎನ್.ಬಿ. ವರದಿ ವಾಚಿಸಿದರು. ಶ್ವೇತಾರವರು ಸ್ವಾಗತಿಸಿ, ಶ್ರೀ ಜಯಪ್ರಸಾದ್ ವಂದಿಸಿದರು. ಶ್ರೀ ವಿನೋದ್ ಕೆ. ಹಾಗೂ ಶ್ರೀ ಮೋಹನ್ ಎ. ರವರು ಕಾರ್ಯಕ್ರಮ ನಿರೂಪಿಸಿದರು.